ADVERTISEMENT

ಮೂಲ ವಿಜ್ಞಾನದತ್ತ ಒಲವು ಮೂಡಿಸಲು ಸಲಹೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2011, 5:50 IST
Last Updated 15 ಸೆಪ್ಟೆಂಬರ್ 2011, 5:50 IST
ಮೂಲ ವಿಜ್ಞಾನದತ್ತ ಒಲವು ಮೂಡಿಸಲು ಸಲಹೆ
ಮೂಲ ವಿಜ್ಞಾನದತ್ತ ಒಲವು ಮೂಡಿಸಲು ಸಲಹೆ   

ಶಿವಮೊಗ್ಗ: ವಿಜ್ಞಾನ, ಕೇವಲ ಲ್ಯಾಬ್‌ನಲ್ಲಿ ಕುಳಿತು ಪ್ರಯೋಗ ಮಾಡುವ ಶಾಸ್ತ್ರವಲ್ಲ; ಅದೊಂದು ಸೃಜನಶೀಲತೆ ಇರುವ ಮನೋಭಾವ ಎಂದು ಬೆಂಗಳೂರಿನ ಎನ್‌ಎಂಕೆಆರ್‌ವಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಂ.ಶ್ರೀಧರಮೂರ್ತಿ ಅರ್ಥೈಸಿದರು.

ನಗರದ ಸಹ್ಯಾದ್ರಿ ವಿಜ್ಞಾನ ಕಾಲೇಜು (ಸ್ವಾಯತ್ತ) ಬುಧವಾರ ಹಮ್ಮಿಕೊಂಡಿದ್ದ ಸಹ್ಯಾದ್ರಿ ವಿಜ್ಞಾನ ಪರಿಷತ್ ಉದ್ಘಾಟನಾ ಸಮಾರಂಭದಲ್ಲಿ  ಅವರು ಮಾತನಾಡಿದರು.

ಮೂಲ ವಿಜ್ಞಾನ ಅಧ್ಯಯನಕ್ಕೆ ವಿದ್ಯಾರ್ಥಿಗಳ ಕೊರತೆ ಎಂಬ ಕೂಗು ಇದೆ. ಆದರೆ, ಮೂಲ ವಿಜ್ಞಾನದತ್ತ ವಿದ್ಯಾರ್ಥಿಗಳನ್ನು ಸೆಳೆಯಲು ಮೊದಲು ಶಿಕ್ಷಕರು ಸಜ್ಜಾಗಬೇಕು. ಹಾಗೆಯೇ, ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ತಮ್ಮ ಮಕ್ಕಳನ್ನು ಇನ್ನೊಬ್ಬರೊಂದಿಗೆ ಹೋಲಿಕೆ ಮಾಡುವ ಪೋಷಕರ ಪ್ರವೃತ್ತಿಯಿಂದಲೇ ಇಂದು ಬಹಳಷ್ಟು ವಿದ್ಯಾರ್ಥಿಗಳು ಓದುವುದರಲ್ಲಿ ನಿರಾಸಕ್ತಿ ಹೊಂದಲು ಕಾರಣವಾಗಿದೆ. ಪೋಷಕರು ತಮ್ಮ ಆಸೆ-ಆಕಾಂಕ್ಷೆಗಳನ್ನು ಮಕ್ಕಳ ಮೇಲೆ ಹೇರುವುದು ಸಲ್ಲದು ಎಂದರು.

ಇದೇ ಸಂದರ್ಭದಲ್ಲಿ ಸುಗಮ ಸಂಗೀತ ಗಾಯಕ ಗರ್ತಿಕೆರೆ ರಾಘಣ್ಣ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಎನ್.ರಾಜೇಶ್ವರಿ, ಅಧ್ಯಾಪಕ ಕಾರ್ಯದರ್ಶಿ ಡಾ.ಎಚ್.ಎಂ. ವಾಗ್ದೇವಿ, ವಿಜ್ಞಾನ ಪರಿಷತ್‌ನ ಪದಾಧಿಕಾರಿಗಳಾದ ಎಸ್.ಸಿ. ನಾಗರಾಜ್, ಟಿ.ಎಂ. ಸುಪ್ರಿತ್‌ಕುಮಾರ್ ಉಪಸ್ಥಿತರಿದ್ದರು.

ಪ್ರಾಂಶುಪಾಲ ಪ್ರೊ.ಬಿ.ಆರ್. ಸಿದ್ದರಾಮಪ್ಪ ಅಧ್ಯಕ್ಷತೆ ವಹಿಸಿದ್ದರು.
ಶಾರದಾದೇವಿ ಅಂಧರ ವಿಕಾಸ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.