ಸೊರಬ: ಪ್ರಾದೇಶಿಕ ಪಕ್ಷಗಳು ಅಧಿಕಾರಕ್ಕೆ ಬಂದಾಗ ಚುನಾವಣಾ ಪೂರ್ವದಲ್ಲಿ ಹೇಳಿದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿವೆ. ಇನ್ನೂ ಕೆಲವು ಭ್ರಷ್ಟಾಚಾರದಲ್ಲಿ ತೊಡಗಿವೆ ಎಂದು ಮಾಜಿ ಸಚಿವ ಕುಮಾರ್ ಬಂಗಾರಪ್ಪ ಆರೋಪಿಸಿದರು.
ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಅವರು ಮಾತನಾಡಿದರು.
ಈ ಹಿಂದೆ ಮಹಾರಾಷ್ಟ್ರ, ಜಮ್ಮು ಕಾಶ್ಮೀರ, ಪಂಜಾಬ್ ಮೊದಲಾದ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷ ರಚನೆಯಾಗಿದ್ದರೂ ಅವುಗಳಲ್ಲಿ ಕೆಲವು ಸ್ವತಂತ್ರವಾಗಿ ಅಧಿಕಾರ ನಡೆಸಿದರೆ ಇನ್ನೂ ಕೆಲವು ಸಮ್ಮಿಶ್ರ ಸರ್ಕಾರದಲ್ಲಿ ಕೈಜೋಡಿಸಿವೆ. ರಾಜ್ಯದಲ್ಲಿ ಪ್ರಾದೇಶಿಕ ಪಕ್ಷ ರಚನೆ ಆದಾಗ ಜನರು ಬೆಂಬಲ ನೀಡಿಲ್ಲ. ಆದ್ದರಿಂದ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಯಶಸ್ವಿಯಾಗಲು ಸಾಧ್ಯವಿಲ್ಲ ಎಂದರು.
ಬಿಜೆಪಿಯ ಕೆಲವು ನಾಯಕರ ಮೇಲೆ ಸೇಡು ತೀರಿಸಿಕೊಳ್ಳಲು ಯಡಿಯೂರಪ್ಪ ಕೆಜೆಪಿ ಪಕ್ಷ ಕಟ್ಟಲು ಹೊರಟಿದ್ದಾರೆ. ಸಾಕಷ್ಟು ಆರೋಪ ಎದುರಿಸುತ್ತಿರುವ ಅವರ ಹಿಂದೆ ಹೋಗಲು ಯಾರೂ ತಯಾರಿಲ್ಲ. ಮುಂದೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ ಎಂಬುದನ್ನು ಅರಿತ ಯಡಿಯೂರಪ್ಪ ತಮ್ಮ ಮೇಲೆ ಆಪಾದನೆ ಬರುವುದನ್ನು ತಪ್ಪಿಸಿಕೊಳ್ಳುವ ಸಲುವಾಗಿ ಬಿಜೆಪಿಯಿಂದ ದೂರ ಹೋಗುವ ನೆಪವೊಡ್ಡಿದ್ದಾರೆ.
ಒಂದು ಸಮಾಜವನ್ನು ಒಡೆಯಲು ಮಠಾಧೀಶರು ಬೆಂಬಲಿಸುತ್ತಾರೆ ಎಂದು ಪಕ್ಷ ಕಟ್ಟಲು ಹೊರಟ ಯಡಿಯೂರಪ್ಪ ಅವರಿಗೆ ಮಠಾಧೀಶರು ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದರು.
ಈ ಬಾರಿ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ತಲೆದೋರುವ ಸಾಧ್ಯತೆಯಿದೆ. ಮುಂಜಾಗ್ರತಾ ಕ್ರಮವಾಗಿ ತಾಲ್ಲೂಕು ಹಾಗೂ ಜಿಲ್ಲಾಡಳಿತ ಎಚ್ಚೆತ್ತು ನದಿಗಳಿಗೆ ಒಡ್ಡು ನಿರ್ಮಿಸಿ ನೀರನ್ನು ಸಂಗ್ರಹಿಸುವ ಮೂಲಕ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಮುಂದಾಗಬೇಕು ಎಂದರು.
ತಾಲ್ಲೂಕಿನ ಆನವಟ್ಟಿ ಹೋಬಳಿ ಸೇರಿದಂತೆ ವಿವಿಧೆಡೆ ಬರಗಾಲದ ಛಾಯೆಯಿದ್ದು, ಬತ್ತದ ಬೆಳೆ ನಾಶವಾಗಿದೆ. ಕೇಂದ್ರ ಸರ್ಕಾರ ಗೋರಖ್ ಸಿಂಗ್ ವರದಿಯಂತೆ ಅಡಿಕೆ ಬೆಳೆಗೆ ರೂ. 1,400 ಕೋಟಿ ಪರಿಹಾರ ನೀಡಿದೆ. ಬಗರ್ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ವಿತರಿಸಬೇಕು. ಅರಣ್ಯ ಸಮಿತಿಯಲ್ಲಿ ವಿಲೇಯಾಗದ ಅರ್ಜಿಗಳಿಗೆ ದೃಢೀಕರಣ ಪತ್ರ ನೀಡಬೇಕು ಎಂದರು.
ಮುಖಂಡರಾದ ತಬಲಿ ಬಂಗಾರಪ್ಪ, ಟಿ.ಆರ್. ಸುರೇಶ್, ಎಂ.ಡಿ. ಉಮೇಶ, ಕೆ. ಅಜ್ಜಪ್ಪ, ತೋಕಪ್ಪ, ರತ್ನಾಕರ, ನಾಗರಾಜ, ಸುರೇಶ್, ಅಬ್ದುಲ್ ಘನಿಸಾಬ್, ಚಂದ್ರಪ್ಪ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.