ಶಿಕಾರಿಪುರ: ‘ರಾಜ್ಯ ಸರ್ಕಾರದ ಆಡಳಿತ ವೈಫಲ್ಯಗಳನ್ನು ಜನ ಸಾಮಾನ್ಯರಿಗೆ ತಿಳಿಸುವ ಮೂಲಕ ಪಕ್ಷವನ್ನು ಅಧಿಕಾರಕ್ಕೆ ತರಲು ವಿಸ್ತಾರಕರು ಶ್ರಮಿಸಬೇಕು’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಕರೆ ನೀಡಿದರು.
ಪಂಡಿತ್ ದೀನ್ದಯಾಳ್ ಉಪಾಧ್ಯಾಯರ ಜನ್ಮ ಶತಾಬ್ದಿ ವರ್ಷದ ವಿಸ್ತಾರಕ ಯೋಜನೆ ಕುರಿತು ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಮಾಹಿತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
‘ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನ ಪಡೆಯಲು ವಿಸ್ತಾರಕ ಯೋಜನೆ ಪ್ರಮುಖ ಪಾತ್ರ ವಹಿಸಿದೆ. ರಾಜ್ಯದಲ್ಲೂ ಮುಂದಿನ ಚುನಾವಣೆಯಲ್ಲಿ ಪಕ್ಷ ಅಧಿಕಾರ ಹಿಡಿಯುವಲ್ಲಿ ಈ ಯೋಜನೆ ಮುಖ್ಯ ಪಾತ್ರ ವಹಿಸಲಿದೆ.
ವಿಸ್ತಾರಕರು ಕೇಂದ್ರ ಸರ್ಕಾರದ ಸಾಧನೆಗಳನ್ನು ತಿಳಿಸಬೇಕು. ಗ್ರಾಮಗಳ ಮನೆಗಳಿಗೆ ಭೇಟಿ ಅವುಗಳನ್ನು ಬಿಜೆಪಿ ಮನೆಯನ್ನಾಗಿ ಪರಿವರ್ತಿಸಬೇಕು’ ಎಂದು ಸಲಹೆ ನೀಡಿದರು.
‘ಪ್ರಧಾನಿ ನರೇಂದ್ರ ಮೋದಿ ಜಿಎಸ್ಟಿ ಜಾರಿಗೊಳಿಸಿರುವುದು ಐತಿಹಾಸಿಕ ನಿರ್ಧಾರ. ತೆರಿಗೆಗಳ್ಳರಿಗೆ ಜಿಎಸ್ಟಿ ಮಾರಕವಾಗಲಿದ್ದು, ಜನಸಾಮಾನ್ಯರಿಗೆ ಪೂರಕವಾಗಲಿದೆ. ಜಿಎಸ್ಟಿ ಪ್ರಾಮಾಣಿಕರ ರಕ್ಷಣೆ ಮಾಡಲಿದೆ’ ಎಂದು ಅವರು ಸಮರ್ಥಿಸಿಕೊಂಡರು.
ಶಾಸಕ ಬಿ.ವೈ. ರಾಘವೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ರುದ್ರೇಗೌಡ, ಪ್ರಧಾನ ಕಾರ್ಯದರ್ಶಿ ಕೆ.ಎಸ್. ಗುರುಮೂರ್ತಿ, ಡಿ.ಎಸ್.ಅರುಣ್, ಮುಖಂಡ ಕೆ.ಹಾಲಪ್ಪ, ರಾಮಾನಾಯ್ಕ, ಎಂ.ಬಿ.ಚನ್ನವೀರಪ್ಪ, ರೇಣುಕಮ್ಮ, ಎ. ಪರಮೇಶ್ವರಪ್ಪ, ನಿವೇದಿತಾ, ಗಾಯತ್ರಿದೇವಿ, ಬಂಗಾರಿನಾಯ್ಕ, ಚಾರಗಲ್ಲಿ ಪರಶುರಾಮ್, ಬಿ.ಡಿ. ಭೂಕಾಂತ್, ತೊಗರ್ಸಿ ಹನುಮಂತಪ್ಪ, ಆರ್.ಕೆ. ಶಂಭು ಅವರೂ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.