ADVERTISEMENT

‘ರೈತರ ಹಿತ ಕಾಯದ ಸರ್ಕಾರಗಳು’

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2017, 10:29 IST
Last Updated 11 ಡಿಸೆಂಬರ್ 2017, 10:29 IST
ರಿಪ್ಪನ್‌ಪೇಟೆ ಸಮೀಪದ ನಾಗರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಜುನಾಥ ಗೌಡ, ಆಲುವಳ್ಳಿ ವೀರೇಶ ಅಭಿಮಾನಿಗಳ ಸಭೆಯನ್ನು ಸೊರಬ ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಿದರು
ರಿಪ್ಪನ್‌ಪೇಟೆ ಸಮೀಪದ ನಾಗರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಂಜುನಾಥ ಗೌಡ, ಆಲುವಳ್ಳಿ ವೀರೇಶ ಅಭಿಮಾನಿಗಳ ಸಭೆಯನ್ನು ಸೊರಬ ಶಾಸಕ ಮಧು ಬಂಗಾರಪ್ಪ ಉದ್ಘಾಟಿಸಿದರು   

ರಿಪ್ಪನ್‌ಪೇಟೆ: ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ರೈತರ ಹಿತ ಕಾಪಾಡುವಲ್ಲಿ ಹಾಗೂ ಜನಪರ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿವೆ’ ಎಂದು ಶಾಸಕ ಮಧು ಬಂಗಾರಪ್ಪ ಆರೋಪಿಸಿದರು.

ನಾಗರಹಳ್ಳಿಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಆರ್‌.ಎಂ.ಮಂಜುನಾಥ ಗೌಡ ಹಾಗೂ ತಾಲ್ಲೂಕು ಪಂಚಾಯ್ತಿ ಸದಸ್ಯ ಆಲುವಳ್ಳಿ ವೀರೇಶ ಅವರ ಅಭಿಮಾನಿಗಳ ಸಭೆ ಉದ್ಘಾಟಿಸಿ ಅವರು ಮಾತನಾಡಿರು.

‘ಜನಸಾಮಾನ್ಯರ ಬದುಕಿನ ಅರಿವು ಹಾಗೂ ರೈತ ಸಮುದಾಯದ ಸಂಕಷ್ಟದ ಅರಿವು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರಿಗೆ ಇದೆ. ರಾಜ್ಯದ ಸಮಗ್ರ ಅಭಿವೃದ್ಧಿ ಹಾಗೂ ಬಡತನ ನಿರ್ಮೂಲನೆ ಜೆಡಿಎಸ್‌ನಿಂದ ಮಾತ್ರ ಸಾಧ್ಯ. ಮುಂಬರುವ ದಿನಗಳಲ್ಲಿ ಪಕ್ಷ ಅಧಿಕಾರಕ್ಕೆ ಬರುವುದು ಖಚಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

ಮುಂದಿನ ಚುನಾವಣೆಯಲ್ಲಿ ತೀರ್ಥಹಳ್ಳಿ ಕ್ಷೇತ್ರದಿಂದ ಜೆಡಿಎಸ್‌ ಅಭ್ಯರ್ಥಿಯಾಗಿ ಆರ್.ಎಂ.ಮಂಜುನಾಥ ಗೌಡ ಅವರನ್ನು ಪಕ್ಷ ಕಣಕ್ಕಿಳಿಸಲಿದೆ ಎಂದು ತಿಳಿಸಿದರು.

‘ಸಣ್ಣ ನೀರಾವರಿ ಸಚಿವರಾಗಿ ಕ್ಷೇತ್ರದ ಬಗ್ಗೆ ಗಮನಹರಿಸದ ಕುಮಾರ್‌ ಬಂಗಾರಪ್ಪ ಈಗ ಬಿಜೆಪಿ ಸೇರಿ ರಾಜಕೀಯ ಅಸ್ತಿತ್ವಕ್ಕೆ ಹೆಣಗುತ್ತಿರುವುದು ನಾಚೀಕೆಗೇಡಿನ ಸಂಗತಿ’ ಎಂದು ಟೀಕಿಸಿದರು.

ಮಂಜುನಾಥಗೌಡ ಮಾತನಾಡಿ, ‘ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ನನ್ನ ಏಳ್ಗೆ ಸಹಿಸದೇ ಸುಳ್ಳು ಆರೋಪಗಳ ಮೂಲಕ ಜೈಲಿಗೆ ಕಳಿಸಿದ್ದವು. ಆದರೆ, ಆರೋಪ ಮುಕ್ತನಾಗಿ ಮುಂದಿನ ಚುನಾವಣೆಗೆ ಜೆಡಿಎಸ್‌ನಿಂದ ಸ್ಪರ್ಧಿಸುವುದು ಖಚಿತ’ ಎಂದರು.

ಅಧ್ಯಕ್ಷತೆ ವಹಿಸಿದ್ದ ವೀರೇಶ ಆಲುವಳ್ಳಿ ಮಾತನಾಡಿ, ತೀರ್ಥಹಳ್ಳಿ ಕ್ಷೇತ್ರದಲ್ಲಿ ಜನಪರ ಆಡಳಿತ ನೀಡುವಲ್ಲಿ ಕಿಮ್ಮನೆ ರತ್ನಾಕರ ಹಾಗೂ ಆರಗ ಜ್ಞಾನೇಂದ್ರ ಸಂಪೂರ್ಣ ವಿಫಲರಾಗಿದ್ದಾರೆ’ ಎಂದು ಟೀಕಿಸಿದರು.

ವಾಟಗೋಡು ಸುರೇಶ, ಎಂ.ಎಂ.ಪರಮೇಶ, ಅಮೀರ್ ಹಂಜ, ದರಲಗೋಡು ನಾಗೇಂದ್ರ ಜೋಯ್ಸ್, ಶ್ರೀಪತಿರಾವ್, ಎಂ.ವಿ.ಜಯರಾಮ, ರಾಘವೇಂದ್ರ , ಗೇರುಗಲ್ಲು ಸತೀಶ ಭಟ್ಟ, ಸುಮತಿ ಆರ್.ಪೂಜಾರ್, ಧರ್ಮೇಶ , ಪ್ರವೀಣ, ರಾಜೇಶ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.