ಶಿವಮೊಗ್ಗ: ಭದ್ರಾವತಿಯ ಬಿ.ಎಚ್.ರಸ್ತೆಯ ಕಡದಕಟ್ಟೆಯ ಮೊರಾರ್ಜಿ ವಸತಿ ಶಾಲೆ ಕಟ್ಟಡ ದುಃಸ್ಥಿತಿಯಲ್ಲಿದ್ದು, ಇದನ್ನು ಸರಿಪಡಿಸಿ, ಶಾಶ್ವತ ಕಟ್ಟಡ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿ ನವ ಕರ್ನಾಟಕ ನಿರ್ಮಾಣ ವೇದಿಕೆ ಕಾರ್ಯಕರ್ತರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕಳೆದ ಐದು ವರ್ಷಗಳಿಂದ ರೈಸ್ಮಿಲ್ ಗೋದಾಮಿನಲ್ಲಿ ವಸತಿ ಶಾಲೆ ನಡೆಸಲಾಗುತ್ತಿದೆ. ಈ ಶಾಲೆಯಲ್ಲಿ 250 ವಿದ್ಯಾರ್ಥಿಗಳು ಅಭ್ಯಾಸ ಮಾಡು ತ್ತಿದ್ದಾರೆ. ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು ಆತಂಕದಲ್ಲಿ ವಿದ್ಯಾಭ್ಯಾಸ ನಡೆಸುವಂತಾಗಿದೆ ಎಂದು ಪ್ರತಿಭಟನಾಕಾರರು ದೂರಿದರು.
ಇಂತಹ ಕಟ್ಟಡಕ್ಕೆ ರೂ.25 ಸಾವಿರ ಹಾಗೂ ಹೆಚ್ಚುವರಿ ಕಟ್ಟಡಕ್ಕೆ ರೂ. 20ಸಾವಿರ ಸೇರಿದಂತೆ ಒಟ್ಟು ರೂ. 45 ಸಾವಿರ ತಿಂಗಳಿಗೆ ಬಾಡಿಗೆ ನೀಡಲಾ ಗುತ್ತಿದ್ದು, ಇದು ಅತ್ಯಧಿಕ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಗೋದಾಮು ಸುತ್ತ ಸೂಕ್ತ ರಕ್ಷಣಾ ಬೇಲಿ ಇಲ್ಲ. ಶಾಲೆಯ ಸಮೀಪವೇ ಬಿ.ಎಚ್.ರಸ್ತೆ ಹಾದು ಹೋಗಿದ್ದು, ಮಕ್ಕಳ ಓಡಾಟಕ್ಕೆ ಅಪಾಯಕಾರಿ ಯಾಗಿದೆ ಎಂದು ದೂರಿದರು.
ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಭೇಟಿ ಪರಿಶೀಲನೆ ನಡೆಸಬೇಕು. ಉತ್ತಮ ಕಟ್ಟಡಕ್ಕೆ ಶಾಲೆ ಸ್ಥಳಾಂತರಿ ಸಬೇಕು. ಕಾರೇಹಳ್ಳಿಯಲ್ಲಿ ಗುರುತಿಸಿದ ಭೂಮಿಯಲ್ಲಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಕಾರ್ಯಕರ್ತರು ಆಗ್ರಹಿಸಿದರು.
ಪ್ರತಿಭಟನೆಯ ನೇತೃತ್ವವನ್ನು ನವ ಕರ್ನಾಟಕ ನಿರ್ಮಾಣ ವೇದಿಕೆ ರಾಜ್ಯ ಅಧ್ಯಕ್ಷ ಗೋ.ರಮೇಶ್ಗೌಡ, ಮಹಿಳಾ ಘಟಕದ ಅಧ್ಯಕ್ಷೆ ಆರ್.ಶಾಂತಮ್ಮ, ಉಪಾಧ್ಯಕ್ಷೆ ಎಲ್.ರೀಟಮ್ಮ, ಪದಾಧಿಕಾರಿಗಳಾದ ನರಸಿಂಹ, ಮಂಜುನಾಥ್, ಮುಮ್ತಾಜ್ಬೇಗಂ, ಸತೀಶ್, ಕಿಶೋರ್, ರಾಜುನಾಯ್ಕ ಮತ್ತಿತರರು ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.