ADVERTISEMENT

ವೈದ್ಯರ ವರ್ಗಾವಣೆ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 9:09 IST
Last Updated 4 ಏಪ್ರಿಲ್ 2013, 9:09 IST

ಭದ್ರಾವತಿ: ಗ್ರಾಮಸ್ಥರ ಜತೆ ಉತ್ತಮ ಬಾಂಧವ್ಯ ಬೆಳೆಸಿಕೊಂಡು ಸೇವೆ ಮಾಡುತ್ತಿದ್ದ ವೈದ್ಯರನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ಸರಿಯಲ್ಲ ಎಂದು ಆರೋಪಿಸಿ ಅಂತರಗಂಗೆ ಗ್ರಾಮಸ್ಥರು ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಂದೆ ಬುಧವಾರ ಪ್ರತಿಭಟನೆ ನಡೆಸಿದರು.

ಈಗ್ಗೆ ಎರಡು ತಿಂಗಳ ಹಿಂದೆ ಗ್ರಾಮದ ಕೇಂದ್ರಕ್ಕೆ ಬಂದಿರುವ ಡಾ.ಗಿರೀಶ್  ಉತ್ತಮ ಕೆಲಸ ಮಾಡುತ್ತಿದ್ದು, ಅವರನ್ನು ವರ್ಗಾವಣೆ ಮಾಡುವ ಮೂಲಕ ಇಲ್ಲಿಯ ಜನರಿಗೆ ತೊಂದರೆ ಸೃಷ್ಟಿ ಮಾಡಲಾಗಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಕಳೆದ ಹಲವು ದಿನದಿಂದ ವೈದ್ಯರಿಲ್ಲದೆ ತೊಂದರೆ ಅನುಭವಿಸಿದ್ದ ಕೇಂದ್ರಕ್ಕೆ ಎರಡು ತಿಂಗಳ ಹಿಂದೆ ಬಂದ ಅವರು ಉತ್ತಮ ಕೆಲಸ ಮಾಡಿದ್ದಾರೆ. ಹಾಗಾಗಿ ಅವರ ಮುಂದುವರಿಕೆ ನಮಗೆ ಅಗತ್ಯ ಎಂದು ಮುಖಂಡರು ಒತ್ತಾಯಿಸಿದರು.

ಪ್ರತಿಭಟನೆ ತೀವ್ರತೆ ಅರಿತ ತಾಲ್ಲೂಕು ವೈದ್ಯಾಧಿಕಾರಿ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿ ಮನವಿ ಸ್ವೀಕರಿಸಿ, ಜಿಲ್ಲಾ ಆರೋಗ್ಯಧಿಕಾರಿ ಗಮನಕ್ಕೆ ವಿಷಯವನ್ನು ರವಾನಿಸಿ, ವ್ಯವಸ್ಥೆ ಮಾಡುವ ಭರವಸೆ ನೀಡಿದ ನಂತರ ಗ್ರಾಮಸ್ಥರು ಪ್ರತಿಭಟನೆ ಹಿಂದಕ್ಕೆ ಪಡೆದರು.

ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಪಿ.ಬಿ. ಅಶೋಕ್, ಉಪಾಧ್ಯಕ್ಷ ನಾಗರಾಜ್, ತಾಲ್ಲೂಕು ಪಂಚಾಯ್ತಿ ಸದಸ್ಯ ಶ್ರೀನಿವಾಸ್, ಮುಖಂಡರಾದ ಕಾಳೇಗೌಡ, ರಾಮೇಗೌಡ, ಸತ್ಯನಾರಾಯಣ, ಎ.ವಿ. ಪರಮೇಶ್, ಉಮೇಶ್, ಆನಂದಪ್ಪ, ಹೇಮಗಿರಿ ಸೇರಿದಂತೆ ಹಲವರು ಪ್ರತಿಭಟನೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.