ಶರಾವತಿ ನದಿ ದಡದ ಆಚೆ-ಈಚೆ ಹಬ್ಬಿಕೊಂಡಿರುವ ಸೊನಲೆ ಗ್ರಾಮವು ತಾಲ್ಲೂಕಿನ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಕ್ಷೇತ್ರದಲ್ಲಿ ತನ್ನದೇ ಆದ ಹೆಸರನ್ನು ಅಚ್ಚೊತ್ತುವ ಮೂಲಕ ಪ್ರಮುಖ ಪಾತ್ರ ವಹಿಸಿದೆ.
ಪುಟ್ಟ ಇತಿಹಾಸ: ಸೊನಲೆ ಎಂಬ ಹೆಸರು ಹಿಂದಿ `ಸೋನಾ~ ಚಿನ್ನ ದೊರಕುತ್ತಿದ್ದ ಸ್ಥಳ ಎಂಬ ಅರ್ಥದಿಂದ ಬಂತು. ಇದನ್ನು ಸೋಸಲೆ, ಸೊಲ್ಲೆ ಎಂಬ ಹೆಸರಿನಿಂದಲೂ ಸ್ಥಳೀಯರು ಕರೆಯುತ್ತಾರೆ. ಹುಲಿ, ಕಾಡು ಕೋಣ, ಹಂದಿ ವಾಸಿಸುತಿದ್ದ ಈ ಗ್ರಾಮವನ್ನು `ಹಂಡೆಸಂಚಿ ಹಕ್ಕಲು~ ಎಂದು ಕರೆಯುತ್ತಿದ್ದರು. ಇದಕ್ಕೆ ತಾಗಿಕೊಂಡಿರುವ `ಬಿಲ್ಲೋಡಿ~ ಗ್ರಾಮದಲ್ಲಿ ಶ್ರೀರಾಮ, ಸೀತೆಯರು ವನವಾಸ ಕಾಲದಲ್ಲಿ ಸ್ವಲ್ಪ ಕಾಲ ತಂಗಿದ್ದರೆಂದು ಹಿರಿಯರು ನಂಬಿದ್ದಾರೆ.
ಹೆಚ್ಚುತ್ತಿರುವ ಬಗರ್ಹುಕುಂ ಕುಟುಂಬ: ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ಕಾರಿ ಸೌಲಭ್ಯ ವಂಚಿತವಾಗಿರುವ 250ಕ್ಕೂ ಹೆಚ್ಚು ಬಗರ್ಹುಕುಂ ಕುಟುಂಬ ಇದೆ. ಜಲವಿದ್ಯುತ್ ಯೋಜನೆಯಿಂದ ಬಂದ ವಲಸಿಗರು, ತುಂಡು-ತುಂಡಾಗುತ್ತಿರುವ `ಕೂಡು ಕುಟುಂಬ~ದ ಪರಿಣಾಮ ಅರಣ್ಯದ ಅಂಚು, ಗೋಮಾಳ ಹಾಗೂ ಕಂದಾಯ ಭೂಮಿಯನ್ನು ಅಕ್ರಮವಾಗಿ ಸಾಗುವಳಿ, ಮನೆ ಕಟ್ಟಿಕೊಂಡ ಬಗರ್ಹುಕುಂ ಫಲಾನುಭವಿಗಳು ಒಟ್ಟು ಗ್ರಾ.ಪಂ.ಯ ಕುಟುಂಬಗಳ ಸಂಖ್ಯೆಯ ಶೇ. 30ರಷ್ಟು ಇದೆ ಎನ್ನುತ್ತಾರೆ ಗ್ರಾ.ಪಂ. ಉಪಾಧ್ಯಕ್ಷ ಎಸ್.ಆರ್. ಈಶ್ವರಪ್ಪ
ರಸ್ತೆ ಕಾಣದ ಹಳ್ಳಿ!: ಡಾಂಬರ್ ರಸ್ತೆ ಒತ್ತಟ್ಟಿಗಿರಲಿ. ಸಂಪರ್ಕ ರಸ್ತೆಯನ್ನೇ ಕಾಣದ ಕಲ್ಲುವೀಡು ಅಬ್ಬಿಗಲ್ಲು, ಹೊಳೆಮತ್ತಿ, ಹೆರಗದ್ದೆ, ಬಾವಿಕೈ ಗ್ರಾಮಗಳು ಈಗಲೂ ಇದೆ ಎಂದರೆ ನಂಬಲೇ ಬೇಕು. ಶರಾವತಿಯ ಉಪ ನದಿಗಳು ಈ ಹಳ್ಳಿಯ ಪಕ್ಕದಲ್ಲಿ ಹರಿಯುತ್ತಿರುವ ಕಾರಣ ಸಂಪರ್ಕ ರಸ್ತೆ, ಸೇತುವೆ ಇಲ್ಲದೇ ಜನರು ಈಗಲೂ ತಲೆ ಹೊರೆಯ ಮೇಲೆ ಕಾಡು ಸುತ್ತಿ ಕಾಲುದಾರಿಯಲ್ಲಿ ಸಾಮಾನು, ಸರಂಜಾಮು ಸಾಗಿಸುತ್ತಾರೆ. ಸಂಪರ್ಕ ರಸ್ತೆ-ಸೇತುವೆಗಾಗಿ ಜನಪ್ರತಿನಿಧಿಗಳಿಗೆ ಗ್ರಾಮಸ್ಥರು ಸಲ್ಲಿಸಿದ ಅಹವಾಲು ಕಸದ ಬುಟ್ಟಿ ಸೇರುತ್ತಿದೆ ಎನ್ನುತ್ತಾರೆ ನೊಂದ ಗ್ರಾಮಸ್ಥರು.
ಮಾಜಿ ಶಾಸಕರ ಊರು: ಸುಮಾರು 11 ವರ್ಷಗಳ ಕಾಲ ಶಾಸಕರಾಗಿ ಸೇವೆ ಸಲ್ಲಿಸಿದ ಮಾಜಿ ಶಾಸಕ 81ರ ಹರೆಯದ ಬಿ. ಸ್ವಾಮಿರಾವ್ ಈ ಗ್ರಾಮದವರು. ತಾ.ಪಂ. ಮಾಜಿ ಅಧ್ಯಕ್ಷ ಪಟೇಲ್ ಗರುಡಪ್ಪ ಗೌಡ, ಶಿವಮೊಗ್ಗ ಹಾಲು ಒಕ್ಕೂಟದ ಮಾಜಿ ಅಧ್ಯಕ್ಷ ನಿವಣೆ ಸೀತಾರಾಮ ಭಟ್ ಹಾಗೂ ಸೊನಲೆ ಗ್ರಾ.ಪಂ. ಮೊದಲ ಚೇರ್ಮನ್ ಆಗಿದ್ದ ದಿವಂಗತ ಕೆ.ಬಿ. ಕೃಷ್ಣಮೂರ್ತಿ ಇವರ ಸೇವೆಯನ್ನು ಗ್ರಾಮಸ್ಥರು ಸ್ಮರಿಸುತ್ತಾರೆ.
ಅಪರೂಪದ ಅಂಟಿಗೆ-ಪಿಂಟಿಗೆ: ಮಲೆನಾಡಿನಲ್ಲಿ ಮರೆಯಾಗುತ್ತಿರುವ ದೀಪಾವಳಿ ಹಬ್ಬದ 3 ದಿನ ಆಚರಿಸುತ್ತಿದ್ದ ಅಂಟಿಗೆ-ಪಿಂಟಿಗೆ ಜಾನಪದ ಕಲೆಯನ್ನು ಸೊನಲೆ ಹಾಗೂ ಬಿಳ್ಳೋಡಿಯಲ್ಲಿ ಜೀವಂತವಾಗಿ ಇರಿಸಿಕೊಂಡಿರುವ ಪ್ರಯತ್ನ ಶ್ಲಾಘನೀಯವಾಗಿದೆ. ಗ್ರಾಮದ ಪ್ರತಿ ಮನೆಗೆ ತೆರಳಿ ಅಂಟಿಗೆ-ಪಿಂಟಿಗೆ ಹಾಡಿ ಕುಣಿದು ಬಂದ ಹಣವನ್ನು ಊರಿನ ದೇವಸ್ಥಾನಕ್ಕೆ ಸಮರ್ಪಿಸುವ ಪರಿಪಾಠ ಅನಾದಿ ಕಾಲದಿಂದ ನಡೆದುಕೊಂಡು ಬಂದಿದೆ.
ಬಿದನೂರು ರಾಜರ ಪ್ರಭಾವದ ಪರಿಣಾಮ ಈ ಭಾಗದಲ್ಲಿ ಶೈವ ದೇಗುಲಗಳು ಹೆಚ್ಚಾಗಿ ಕಂಡು ಬರುತ್ತದೆ. ಸುಮಾರು 8 ಅಡಿ ಎತ್ತರದ ಲಿಂಗ ಇರುವ ಅಪರೂಪದ ಪುರಾಣ ಪ್ರಸಿದ್ಧ ಸೊನಲೆಯ ರಾಮೇಶ್ವರ ದೇವಸ್ಥಾನ, ನಿವಣೆಯ ಕಲಾನಾಥೇಶ್ವರ ದೇವಸ್ಥಾನ, ಕೊಳಗಿಯ ಬಸವಣ್ಣ, ಹೆಗ್ಗರುಸಿನ ಬಸವೇಶ್ವರ, ಕಲ್ಲುವೀಡು ಅಬ್ಬಿಗಲ್ಲು ಗ್ರಾಮದ ರಾಮೇಶ್ವರ ದೇವಸ್ಥಾನ, ಬಿಳ್ಳೋಡಿಯ ಮಾರಿಕಾಂಬ ಗುಡಿ ಇದೆ. ಕೆಳದಿ ಅರಸರು ಸಂಚರಿಸುತ್ತಿದ್ದ ಈ ಭಾಗದಲ್ಲಿ ಆನೆ ಕಟ್ಟುವ ನಿಲ್ಸಕಲ್ ಸಹ ಇದೆ.
ರಾಜ್ಯ ಪ್ರಶಸ್ತಿ ಪುರಸ್ಕೃತ ಶಾಲೆ: ಸತತ 6 ವರ್ಷಗಳ ಕಾಲ ಎಸ್ಸೆಸ್ಸೆಲ್ಸಿಯಲ್ಲಿ ಶೇ. ನೂರಕ್ಕೆ ನೂರು ಫಲಿತಾಂಶ ಸಾಧನೆ ಮಾಡಿದ ರಾಜ್ಯದ ಬೆರಳೆಣಿಕೆಯ ಪ್ರತಿಷ್ಠಿತ ಶಾಲೆಗಳಲ್ಲಿ ಸೊನಲೆಯ ಸರ್ಕಾರಿ ಪ್ರೌಢಶಾಲೆಯೂ ಒಂದು. ಅತ್ಯುತ್ತಮ ಶಿಕ್ಷಣಕ್ಕಾಗಿ ಗಾಂಧಿವಾದಿ ಗೋವಿಂದೇಗೌಡ ರಾಜ್ಯ ಪ್ರಶಸ್ತಿ, `ಹಸಿರು ಶಾಲೆ~ ಪರಿಸರಮಿತ್ರ ಪ್ರಶಸ್ತಿ ಸಹ ಈ ಶಾಲೆಗೆ ಲಭಿಸಿದೆ. ಕೇವಲ ಓದಿನಲ್ಲಿ ಮಾತ್ರ ಅಲ್ಲದೇ, ಕ್ರೀಡೆಯಲ್ಲಿಯೂ ಸಹ ಮುಂಚೂಣಿಯಲ್ಲಿರುವ ಈ ಶಾಲೆಯು ವಾಲಿಬಾಲ್, ಬಾಲ್ಬ್ಯಾಡ್ಮಿಂಟನ್ ಪಂದ್ಯದಲ್ಲಿ ಜಿಲ್ಲಾಮಟ್ಟದಲ್ಲಿ ವಿಜೇತರಾಗಿದ್ದಾರೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯೂ ಸಹ ಶತಮಾನದ ಅಂಚಿನಲ್ಲಿದೆ.
9 ಗ್ರಾಮಗಳಿಂದ 10 ಸದಸ್ಯರು ಇರುವ ಸೊನಲೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸುಮಾರು 826 ಕುಟುಂಬಗಳು ಇದೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಈ ಸಾಲಿಗೆ ಸುಮಾರು ರೂ 27 ಲಕ್ಷ ಕ್ರಿಯಾ ಯೋಜನೆ ಮಾಡಲಾಗಿದ್ದು ರೂ 14 ಲಕ್ಷ ವೆಚ್ಚದ ಕಾಮಗಾರಿಯನ್ನು ಕುಡಿಯುವ ನೀರಿಗೆ, ಕಾಲುಸಂಕ, ರಸ್ತೆ, ಚಾನಲ್ಗಳಿಗೆ ಬಳಸಲಾಗಿದೆ ಎಂದು ಗ್ರಾ.ಪಂ. ಅಧ್ಯಕ್ಷೆ ಯಶೋದಮ್ಮ ತಿಳಿಸಿದರು.
100ಕ್ಕೂ ಹೆಚ್ಚು ಕುಟುಂಬಗಳಿರುವ ಸೊನಲೆ ಗ್ರಾಮದಲ್ಲಿ ಬೇಸಿಗೆಯಲ್ಲಿ ಕುಡಿಯುವ ನೀರಿನ ಬರ ಇದೆ. ಇದನ್ನು ನಿವಾರಿಸಲು ವಡಗೆರೆ ಕೆರೆ ಅಭಿವೃದ್ದಿ ಕಾರ್ಯಕ್ಕೆ ಸರ್ಕಾರ ಹಣ ನೀಡಬೇಕಿದೆ ಎನ್ನುತ್ತಾರೆ ಗ್ರಾ.ಪಂ. ಸದಸ್ಯರು.
ರಾಜಕೀಯ ಮುತ್ಸದ್ದಿಗಳು ಹೆಚ್ಚಾಗಿರುವ ಶರಾವತಿ ನದಿ ದಡದ ಮೇಲೆ ಇರುವ ಸೊನಲೆ ಅಭಿವೃದ್ದಿಯ ಕನಸು ಕಾಣುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.