ADVERTISEMENT

ಸನ್ಮಾರ್ಗದಲ್ಲಿ ನಡೆಯಲು ವಿದ್ಯಾರ್ಥಿಗಳಿಗೆ ಕರೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:01 IST
Last Updated 20 ಸೆಪ್ಟೆಂಬರ್ 2013, 9:01 IST

ತೀರ್ಥಹಳ್ಳಿ: ವಿದ್ಯಾರ್ಥಿಗಳನ್ನು ಸನ್ಮಾರ್ಗದಲ್ಲಿ ನಡೆಸಿಕೊಂಡು ಹೋಗುವ ಪ್ರಯತ್ನವನ್ನು ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಂಘಟನೆ (ಎಸ್‌ಎಸ್‌ಎಫ್) ನಿರಂತರ ವಾಗಿ ಮಾಡಿಕೊಂಡು ಬಂದಿದೆ. ಎಸ್‌ಎಸ್‌ಎಫ್ ಸಂಘಟನೆ 25 ವರ್ಷಗಳ ಹೊಸ್ತಿಲಿನಲ್ಲಿ ಇರುವ ಈ ಸಂದರ್ಭದಲ್ಲಿ ಬೆಳ್ಳಿಹಬ್ಬದ ಅಂಗವಾಗಿ 25 ಅಂಶಗಳ ಮಹತ್ತರವಾದ ಕಾರ್ಯಕ್ರಮವನ್ನು ಸಂಘಟನೆ ಹಮ್ಮಿಕೊಳ್ಳಲಿದೆ ಎಂದು ಎಸ್‌ಎಸ್‌ಎಫ್‌ನ ರಾಷ್ಟ್ರೀಯ ಸದಸ್ಯ ಯಾಖೂಬ್ ಯೂಸಫ್ ಹೊಸನಗರ ಅಭಿಪ್ರಾಯಪಟ್ಟರು.

ಗುರುವಾರ ತೀರ್ಥಹಳ್ಳಿಯ ನೂರುಲ್ ಹುದಾ ಮದರಸಾ ಸಭಾಂಗಣದಲ್ಲಿ ಸಂಘಟನೆಯ 25ನೇ ಬೆಳ್ಳಿಹಬ್ಬದ ಘೋಷಣೆಗಳನ್ನು ಬಿಡುಗಡೆಗೊಳಿಸಿ ಮಾತನಾಡಿದರು.

ಎಸ್‌ಎಸ್‌ಎಫ್ ತತ್ವ ಸಿದ್ಧಾಂತ ಗಳನ್ನು ಒಳಗೊಂಡ ಸಂಘಟನೆ ಯಾಗಿದ್ದ, ವಿದ್ಯಾರ್ಥಿಗಳು ಧಾರ್ಮಿಕ ಕ್ಷೇತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಮುಂದುವರಿಯಲು ಈ ಸಂಘಟನೆ ಉತ್ತಮ ವೇದಿಕೆ ಕಲ್ಪಿಸಲಿದೆ ಎಂದರು.

ಎಸ್‌ಎಸ್‌ಫ್‌ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್ ಸಂಘಟನೆಯ ಬೆಳ್ಳಿಹಬ್ಬದ ಘೋಷಣಾ ಸಮಾವೇಶ ಉದ್ಘಾಟಿಸಿ  ಮಾತನಾಡಿ, ಪಠ್ಯಪುಸ್ತಕಗಳ ಜತೆಯಲ್ಲಿ ವಿವಿಧ ಧರ್ಮಗಳ ಗ್ರಂಥಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಎಸ್‌ಎಸ್‌ಎಫ್ ಜಿಲ್ಲಾ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಮುಸ್ಲಿಯಾರ್ ಮಾತನಾಡಿ, ಭಯೋತ್ಪಾದನೆ, ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವವರನ್ನು ಎಸ್‌ಎಸ್‌ಎಫ್ ಸಂಘಟನೆ ತೀವ್ರವಾಗಿ ಖಂಡಿಸುತ್ತದೆ ಎಂದರು.

ಹೈದರಲಿ ನಿಝಾಮಿ, ಎಸ್‌ಜೆಎಂ ಜಿಲ್ಲಾಧ್ಯಕ್ಷ ಅಬ್ದುಲ್ ಜಬ್ಬಾರ್, ಎಸ್‌ಎಸ್‌ಎಫ್ ಸಂಘಟನೆಯ ಸಾಗರ ವಲಯದ ಸೈಫುಲ್ಲಾ
ಸಖಾಫಿ, ಹೊಸನಗರ ವಲಯದ ತಸ್ಲೀಮ್ ಸಖಾಫಿ, ಭದ್ರಾವತಿ ವಲಯದ ನೌಶಾದ್ ಮದನಿ, ಎಂಇಎಸ್ ತೀರ್ಥಹಳ್ಳಿ ಅಧ್ಯಕ್ಷ ರಿಯಾಜ್‌, ಬೆಜ್ಜವಳ್ಳಿ ಹನೀಫ್, ವಿದ್ಯಾರ್ಥಿ ಮುಖಂಡ ಶಿಹಾಬ್ ಉಪಸ್ಥಿತರಿದ್ದರು.  ಮುಹಮದ್ ರಫೀಕ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.