ADVERTISEMENT

ಸಮಗ್ರ ಜೀವನಕ್ಕೆ ಶಿಕ್ಷಣ ಅಗತ್ಯ

​ಪ್ರಜಾವಾಣಿ ವಾರ್ತೆ
Published 14 ಜನವರಿ 2011, 8:55 IST
Last Updated 14 ಜನವರಿ 2011, 8:55 IST

ಶಿವಮೊಗ್ಗ: ಶಿಕ್ಷಣ, ಜೀವನ ನಿರ್ವಹಣೆಗೆ ಅಲ್ಲ; ಸಮಗ್ರ ಜೀವನಕ್ಕೆ ಬೇಕಾಗಿದೆ ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಸರಸ್ವತಿ ಹೇಳಿದರು.ನಗರದ ಪಿಇಎಸ್ ಪಬ್ಲಿಕ್ ಸ್ಕೂಲ್‌ನ ವಾರ್ಷಿಕೋತ್ಸವ ಸಮಾರಂಭದಲ್ಲಿ ಗುರುವಾರ ಅವರು ಮಾತನಾಡಿದರು.

ಇಂದು ಶಿಕ್ಷಣ ಕೇವಲ ಜೀವನ ನಿರ್ವಹಣೆಗಾಗಿ ಮಾತ್ರ ಎನ್ನುವಂತಾಗಿದೆ. ಆದರೆ, ಶಿಕ್ಷಣ ನಮ್ಮ ಇಡೀ ಜೀವನಕ್ಕೆ ಬೇಕಾಗಿದೆ. ಶಿಕ್ಷಣ ಎನ್ನುವುದು ಶಕ್ತಿ. ಅದು ಪ್ರಾಣಿ ಮತ್ತು ಮನುಷ್ಯರ ನಡುವೆ ಇರುವ ಬೆಳವಣಿಗೆಯನ್ನು ತೋರಿಸುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರಾಥಮಿಕ ಶಿಕ್ಷಣವನ್ನು ನಿರ್ಲಕ್ಷ್ಯ ಮಾಡಲಾಗಿದೆ. ತಾಂತ್ರಿಕ, ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿದೆ. ನಮಗೆ ಯಾವ ಮಟ್ಟದ ಶಿಕ್ಷಣ ಬೇಕು ಎಂಬುದು ಯಾರಿಗೂ ಗೊತ್ತಿಲ್ಲ. ಆದರೂ ಹೇಗೋ ನಡೆದು ಹೋಗುತ್ತಿದೆ. ಅದೇ ವಿಚಿತ್ರ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.ಶಿಕ್ಷಣದ ಅಡಿಪಾಯವಾದ ಪ್ರಾಥಮಿಕ ಶಿಕ್ಷಣಕ್ಕೆ ಬಹಳ ಎಚ್ಚರಿಕೆ ನೀಡುವ ಅವಶ್ಯಕತೆ ಇದೆ. ಮೃದುವಾದ ಮನಸ್ಸಿನ ಮೇಲೆ ಉನ್ನತ ವಿಚಾರಗಳನ್ನು ಒತ್ತಬೇಕಿದೆ ಎಂದರು.

ರಾಜ್ಯದಲ್ಲಿ ವರ್ಷಕ್ಕೆ ್ಙ 1 ಕೋಟಿ ಮೌಲ್ಯದ ಆಧ್ಯಾತ್ಮಿಕ ಪುಸ್ತಕಗಳು ಮಾರಾಟವಾಗುತ್ತಿವೆ. ಇತ್ತೀಚೆಗೆ ನಡೆದ ಸಂಸ್ಕೃತ ಸಮ್ಮೇಳನದಲ್ಲಿ ್ಙ 5.5 ಕೋಟಿ ಮೌಲ್ಯದ ಸಂಸ್ಕೃತ ಭಾಷೆಯ ಪುಸ್ತಕಗಳು ಮಾರಾಟವಾಗಿವೆ. ಇದು ಸಂಸ್ಕೃತ ಭಾಷೆಗಿನ ಜನರ ಪ್ರೀತಿಯನ್ನು ತೋರಿಸುತ್ತದೆ. ಆದರೆ, ಅರೆಬೆಂದ ಬುದ್ಧಿಜೀವಿಗಳು, ಆ ಭಾಷೆ ಅರ್ಥವಾಗದಿದ್ದವರು ಸಂಸ್ಕೃತವನ್ನು ಸತ್ತ ಭಾಷೆ ಎಂದು ಟೀಕಿಸುತ್ತಿದ್ದಾರೆ. ಹಾಗಾದರೆ ಧರ್ಮ ಸತ್ತಿದೆಯೇ? ಅಥವಾ ನಮಗೆ ಅರ್ಥವಾಗದಿರುವುದು ಸತ್ತ ಭಾಷೆಯೇ ಎಂದು ಸ್ವಾಮೀಜಿ ತೀಕ್ಷ್ಣವಾಗಿ ಪ್ರಶ್ನಿಸಿದರು.

ಇಡೀ ವಿಶ್ವಕ್ಕೆ ಶ್ರೇಷ್ಠಮಟ್ಟದ ಶಿಕ್ಷಣವನ್ನು ನೀಡಿದವರು ನಾವು. ಭೂಮಿ, ಸೂರ್ಯನ ಸುತ್ತಲು ಸುತ್ತುತ್ತದೆ ಎಂದು ಹೇಳಿದವರು ನಾವು. ಹಲವು ಆವಿಷ್ಕಾರಗಳು ಭಾರತದಲ್ಲೇ ನಡೆದಿದೆ. ಆದರೂ ಭಾರತವನ್ನು ಭಾರತದವರೇ ಹೀಗಳಿಯುವ ಪ್ರವೃತ್ತಿ ಸಲ್ಲದು ಎಂದರು.

ಶಾಲೆಯ ಸಂಚಿಕೆಯನ್ನು ಪಿಇಎಸ್ ಟ್ರಸ್ಟ್ ಜಂಟಿ ಕಾರ್ಯದರ್ಶಿ ಎಸ್.ವೈ. ಅರುಣಾದೇವಿ ಬಿಡುಗಡೆ ಮಾಡಿದರು. ಪಿಇಎಸ್‌ಐಟಿಎಂ ಪ್ರಾಂಶುಪಾಲ ಡಾ.ವಿಶ್ವನಾಥ ಪಿ. ಬಳಿಗಾರ್ ಉಪಸ್ಥಿತರಿದ್ದರು. ಸಂಸದ ಬಿ.ವೈ. ರಾಘವೇಂದ್ರ ಅಧ್ಯಕ್ಷತೆ ವಹಿಸಿದ್ದರು.ಪಿಇಎಸ್ ಪಬ್ಲಿಕ್ ಸ್ಕೂಲ್‌ನ ಪ್ರಾಂಶುಪಾಲ ವಿ.ಎಲ್. ಬಾಲಸುಬ್ರಹ್ಮಣ್ಯನ್ ಸ್ವಾಗತಿಸಿದರು.ಕೆ. ಮಧುಸೂದನ್ ವಂದಿಸಿದರು. ನಂತರ, ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.