ಶಿವಮೊಗ್ಗ: ಪಶು ವೈದ್ಯಕೀಯ ಇಲಾಖೆಯ ಒತ್ತಡದ ಕೆಲಸದ ನಡುವೆಯೂ ಪರೀಕ್ಷಕರು ಉತ್ತಮ ಕೆಲಸ ನಿರ್ವಹಿಸಿದ್ದಾರೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸದಾಶಿವಪ್ಪ ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಭವನದಲ್ಲಿ ಪಶು ವೈದ್ಯಕೀಯ ಪರೀಕ್ಷಕರ ಸಂಘ ಬುಧವಾರ ಆಯೋಜಿಸಿದ್ದ ತಾಂತ್ರಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಲಾಖೆಯಲ್ಲಿ ದಿನದ 24 ಗಂಟೆಯೂ ಕೆಲಸವಿರುತ್ತದೆ. ಪರೀಕ್ಷಕರು ಎಲೆಮರೆ ಕಾಯಿಯಂತೆ ಸೇವೆ ಸಲ್ಲಿಸುತ್ತಿದ್ದಾರೆ. ಕೆಲಸದಲ್ಲಿ ಬಿಡುವು ಸಿಗುವುದು ಕಡಿಮೆ, ಅದರಲ್ಲೂ ಅವರು ಉತ್ತಮ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.
ಜಾನುವಾರಿಗೆ ಸಂಬಂಧಿಸಿದಂತೆ ನಾನಾ ರೀತಿಯ ನಿಗೂಢ ಕಾಯಿಲೆಗಳಿವೆ. ಸಸ್ಯಾಹಾರ ಸೇವನೆಯಿಂದ ವಿಷಬಾಧೆ ಉಂಟಾಗುತ್ತದೆ ಎಂದು ತಿಳಿದಿರಲಿಲ್ಲ. ಆದರೆ, ಸಸ್ಯಾಹಾರ ವಿಷಬಾಧೆಯಿಂದಾಗಿ ಜಾನುವಾರು ಮೃತಪಡುತ್ತವೆ ಎಂಬುದು ಸಂಶೋಧನೆಯಿಂದ ತಿಳಿದುಬಂದಿದೆ ಎಂದು ಹೇಳಿದರು.
ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಾರ್ಯದರ್ಶಿ ಮೋಹನ್ ಮಾತನಾಡಿ, ‘6ನೇ ವೇತನ ಆಯೋಗಕ್ಕೆ ಸಹಾಯವಾಗಲಿ ಎಂದು ರಾಜ್ಯ ಸಂಘದ ಅಡಿಯಲ್ಲಿ ಆಂತರಿಕ ಸಮಿತಿ ರಚನೆ ಮಾಡಲಾಗಿದೆ. ವಿವಿಧ ವೃಂದ ಹಾಗೂ ಇಲಾಖೆಗಳ ಹುದ್ದೆಗಳಿಗೆ ವೇತನ ಪರಿಷ್ಕರಣೆ ಎಷ್ಟು ಆಗಬೇಕಿದೆ ಎಂಬುದರ ಬಗ್ಗೆ ಒಂದು ಸಾವಿರ ಪುಟಗಳ ವರದಿ ನೀಡಲಾಗಿದೆ. ಇದರಿಂದ ವೇತನ ಆಯೋಗದ ಕೆಲಸ ಶೇ 90ರಷ್ಟು ಪೂರ್ಣಗೊಂಡಿದೆ’ ಎಂದು ಹೇಳಿದರು.
ಪರಿಕ್ಷಕರ ಸಂಘದ ಅಧ್ಯಕ್ಷ ರಮೇಶ್, ಡಾ.ಎನ್.ಎಸ್.ಜಯಪ್ರಕಾಶ್, ಗಿರೀಶ್, ಯುವರಾಜ್, ಜಯಕೀರ್ತಿ ಜೈನ್, ತಾರಾ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.