ADVERTISEMENT

ಸಾಗರ ರಸ್ತೆಯಲ್ಲಿ ಮತ್ತೊಂದು ಬಡಾವಣೆ

ರೈತರು ಹಾಗೂ ಅಧಿಕಾರಿಗಳ ಸಭೆ; 50: 50ರ ಅನುಪಾತದ ನಿವೇಶನ ಒಪ್ಪಂದಕ್ಕೆ ರೈತರ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 4 ಜುಲೈ 2015, 9:34 IST
Last Updated 4 ಜುಲೈ 2015, 9:34 IST
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ರೈತರ ಸಭೆ.
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಶುಕ್ರವಾರ ನಡೆದ ರೈತರ ಸಭೆ.   

ಶಿವಮೊಗ್ಗ: ಸಾಗರ ರಸ್ತೆಯಲ್ಲಿ ಇರುವ ವಾಜಪೇಯಿ ಬಡಾವಣೆಗೆ ಹೊಂದಿಕೊಂಡಂತೆ ಮತ್ತೊಂದು ಹೊಸ ಬಡಾವಣೆ ನಿರ್ಮಿಸಲು ನಗರಾಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ.

ರೈತರ ಸಹಭಾಗಿತ್ವದಲ್ಲಿ, ಶೇ 50: 50ರ ಅನುಪಾತದಲ್ಲಿ 80 ಎಕರೆ ಪ್ರದೇಶದಲ್ಲಿ ಹೊಸ ಬಡಾವಣೆ ನಿರ್ಮಾಣವಾಗಲಿದೆ. ಈ ಸಂಬಂಧ  ‘ಸೂಡಾ’ ಕಚೇರಿಯಲ್ಲಿ ಶುಕ್ರವಾರ ಆ ಭಾಗದ ರೈತರು ಹಾಗೂ ಅಧಿಕಾರಿಗಳ ಸಭೆ ನಡೆಯಿತು. ಸಹಭಾಗಿತ್ವದ ಯೋಜನೆಗೆ ಬಹುತೇಕ ರೈತರು ಸಮ್ಮತಿ ಸೂಚಿಸಿದರು.

ನಂತರ ಮಾತನಾಡಿದ ಪ್ರಾಧಿಕಾರದ ಅಧ್ಯಕ್ಷ ಎನ್‌.ರಮೇಶ್‌, ಈ ಹಿಂದೆಯೇ ರೈತರಿಂದ ಭೂಮಿ ವಶಕ್ಕೆ ಪಡೆಯಲು ಮಾತುಕತೆ ನಡೆದಿತ್ತು. ಆಗ ರೈತರು ಪರಿಹಾರದ ಮೊತ್ತವನ್ನು ಒಪ್ಪಿಕೊಂಡಿರಲಿಲ್ಲ. ಹಾಗಾಗಿ, ಯೋಜನೆ ನನೆಗುದಿಗೆ ಬಿದ್ದಿತ್ತು ಎಂದರು.

80 ಎಕರೆ ಅಭಿವೃದ್ಧಿಪಡಿಸಲು ಸುಮಾರು ₹ 20 ಕೋಟಿ ವೆಚ್ಚವಾಗುತ್ತದೆ. ಒಟ್ಟು 1760 ನಿವೇಶನ ರೂಪಿಸಲಾಗುವುದು. ಪ್ರತಿ ಎಕರೆಯಲ್ಲೂ 2025 ನಿವೇಶನ ನಿರ್ಮಾಣವಾಗಲಿದ್ದು, ರೈತರಿಗೆ ಅರ್ಧದಷ್ಟು ನೀಡಲಾಗುವುದು. ರೈತರು ಮಾರುಕಟ್ಟೆ ಬೆಲೆಯಲ್ಲಿ ಅವುಗಳನ್ನು ಮಾರಾಟ ಮಾಡಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ‘ಸುಡಾ’ ಆಯುಕ್ತ ಜನಾರ್ದನ್, ಪಾಲಿಕೆ ಸದಸ್ಯ ನರಸಿಂಹಮೂರ್ತಿ, ನಗರ ಯೋಜನಾ ಸದಸ್ಯ ಶಂಕರ್, ರವಿಕುಮಾರ್ ಸೇರಿದಂತೆ 70 ರೈತರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.