ಸೊರಬ: ಹಬ್ಬ-ಹರಿದಿನಗಳ ಉದ್ದೇಶ ಪರಸ್ಪರ ಸೌಹಾರ್ದಕ್ಕೆ ಪೂರಕವಾಗಿರಬೇಕು. ಇಲ್ಲವಾದಲ್ಲಿ ಆಚರಣೆ ಅರ್ಥ ರಹಿತ ಆಗುತ್ತದೆ ಎಂದು ಪಟ್ಟಣದ ರೂರಲ್ ಹಾಗೂ ಅರ್ಬನ್ ಡೆವಲಪ್ಮೆಂಟ್ ಸೊಸೈಟಿ ಅಧ್ಯಕ್ಷ ಸುಬ್ರಹ್ಮಣ್ಯ ಗುಡಿಗಾರ್ ಹೇಳಿದರು.ಪಟ್ಟಣದ ಬಸವೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ವಿವಿಧ ಸಂಘ-ಸಂಸ್ಥೆಗಳು ಹಮ್ಮಿಕೊಂಡಿದ್ದ ಜಾನಪದ ನೃತ್ಯಲೋಕ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
ಉತ್ಸವದ ಅಂಗವಾಗಿ ಶಾಲಾ, ಕಾಲೇಜು ಹಾಗೂ ಸಂಘ ಸಂಸ್ಥೆ ಕಲಾವಿದರಿಂದ ಜಾನಪದ ನೃತ್ಯ, ಉಳವಿಯ ಎನ್.ಬಿ. ಪ್ರವೀಣ್ ಹಾಗೂ ಶಿಷ್ಯರಿಂದ ಸಂಗೀತ ಕಾರ್ಯಕ್ರಮ, ರಂಗವಲ್ಲಿ ಸ್ಪರ್ಧೆ, ನಗೆ ಹಬ್ಬ ಕಾರ್ಯಕ್ರಮ ನಡೆದವು.ಟೌನ್ ವೀರಶೈವ ಸಮಾಜದ ಅಧ್ಯಕ್ಷ ಚನ್ನಬಸಪ್ಪ, ಗಣಪತಿ ದೇವಸ್ಥಾನದ ಟ್ರಸ್ಟಿ ಸಿದ್ದಬಸಪ್ಪ, ವಿಶ್ವಕರ್ಮ ಯುವವೇದಿಕೆಯ ದತ್ತಾತ್ರೇಯ ಆಚಾರ್, ವೈಜಯಂತಿ ಜೇಸೀಸ್ ಅಧ್ಯಕ್ಷ ಕೆ.ಎಸ್. ಹುಚ್ರಾಯಪ್ಪ, ನಮ್ಮೂರು ಸಮುದಾಯ ಅಭಿವೃದ್ಧಿ ಸಂಸ್ಥೆಯ ಮಹೇಶ್, ಷಣ್ಮುಖಾಚಾರ್ ಹಾಜರಿದ್ದರು.
ಸಾಂಕ್ರಾಮಿಕ ರೋಗ ಭೀತಿ: ಎಚ್ಚರಿಕೆ
ತೀರ್ಥಹಳ್ಳಿ ವರದಿ: ತಾಲ್ಲೂಕಿನಾದ್ಯಂತ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದ್ದು, ಆರೋಗ್ಯ ಇಲಾಖೆ ರೋಗ ಹರಡದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಕಿರಣ್ ತಿಳಿಸಿದರು.ತಾ.ಪಂ. ಸಭಾಂಗಣದಲ್ಲಿ ಈಚೆಗೆ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪಟ್ಟಣದ ಬಾಳೇಬೈಲಿನಲ್ಲಿ ಎಚ್1ಎನ್1 ನಿಂದ ಖೈರುನ್ನಿಸಾ (26) ಎಂಬಾಕೆ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಜನರಲ್ಲಿ ಆತಂಕ ಮೂಡಲು ಕಾರಣವಾಗಿದೆ ಎಂದರು.
ಜನರಲ್ಲಿ ಜ್ವರ ಕಂಡು ಬಂದರೆ ತಕ್ಷಣ ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುವಂತೆ ಅವರು ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯ ನಿರ್ವಹಣಾಧಿಕಾರಿ ಡಾ.ವಿ.ಕೆ. ಮಂಜುನಾಥ್, ಜೆ.ಸಿ. ಆಸ್ಪತ್ರೆ ವೈದ್ಯ ಡಾ.ಪ್ರಭಾಕರ್ ಹಾಗೂ ಆರೋಗ್ಯ ಸಹಾಯಕ ಸತೀಶ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.