ADVERTISEMENT

ಸ್ಪರ್ಧಾತ್ಮಕ ಜೀವನಕ್ಕೆ ತಯಾರಾಗಿ: ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2011, 11:05 IST
Last Updated 20 ಫೆಬ್ರುವರಿ 2011, 11:05 IST

ಸೊರಬ: ಗ್ರಾಮೀಣ ಪ್ರದೇಶಗಳಲ್ಲಿ ಖಾಸಗಿ ವಿದ್ಯಾಸಂಸ್ಥೆಗಳು ವಿದ್ಯಾರ್ಥಿಗಳಿಗೆ ಜ್ಞಾನ ನೀಡುವಲ್ಲಿ ಮಹತ್ತರ ಪಾತ್ರ ವಹಿಸಿವೆ. ಶಿಕ್ಷಣಾಭಿಮಾನಿಗಳ ಹೆಮ್ಮೆಗೆ ಕಾರಣ ಆಗಿವೆ ಎಂದು ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ನುಡಿದರು.ಸಮೀಪದ ಕುಪ್ಪಗಡ್ಡೆಯಲ್ಲಿ ಈಚೆಗೆ ಸ್ಥಳೀಯ ದಂಡಾವತಿ ವಿದ್ಯಾವರ್ಧಕ ಸಂಘದ ರಾಷ್ಟ್ರೀಯ ಪ್ರೌಢಶಾಲೆಯ ನೂತನ ಶಾಲಾ ಕೊಠಡಿ ಉದ್ಘಾಟಿಸಿ ಅವರು ಮಾತನಾಡಿದರು.

ಮಲೆನಾಡು ಪ್ರೌಢಶಾಲೆಗಳು ತಾಲ್ಲೂಕು ಹಾಗೂ ಸುತ್ತಮುತ್ತ ಬಹು ವರ್ಷಗಳ ಹಿಂದಿನಿಂದ ಶೈಕ್ಷಣಿಕ ಪ್ರಗತಿಗೆ ಕಾರಣ ಆಗಿ, ಸಮಾಜದ ವಿವಿಧ ಕ್ಷೇತ್ರಗಳಿಗೆ ಗಣ್ಯರ ಕಾಣಿಕೆ ನೀಡಿವೆ. ಹೆಣ್ಣುಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು ನೀಡಿವೆ. ಗ್ರಾಮೀಣ ಕೃಪಾಂಕ, ರೈತರಿಗೆ ಉಚಿತ ವಿದ್ಯುತ್, ಪೊಲೀಸರಿಗೆ ಸ್ಟಾರ್ ಗೌರವ ಮೊದಲಾದ ತಮ್ಮ ಅಧಿಕಾರಾವಧಿಯ ಸಾಧನೆಗಳನ್ನು ವಿವರಿಸಿದರು.

ಸ್ಪರ್ಧಾತ್ಮಕ ಅಭ್ಯಾಸಕ್ಕೆ ಮುಂದಾಗಿ ಭವಿಷ್ಯವನ್ನು ಉಜ್ವಲಗೊಳಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇದೇ ಸಂದರ್ಭದಲ್ಲಿ ಬಂಗಾರಪ್ಪ, ಶಾಲಾ ನಿವೇಶನ ದಾನಿಗಳ ಭಾವಚಿತ್ರ ಅನಾವರಣಗೊಳಿಸಿದರು.ಗ್ರಾ.ಪಂ. ಅಧ್ಯಕ್ಷ ಆನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ವಿಮಲಾ ಚಂದ್ರಪ್ಪ, ತಾ.ಪಂ. ಸದಸ್ಯೆ ಲಕ್ಷ್ಮೀಜಗದೀಶ್, ಸಂಘದ ಮಾಜಿ ಅಧ್ಯಕ್ಷ ಕೆ. ನಾಗಪ್ಪ, ಕಾರ್ಯದರ್ಶಿ ಟಿ. ಹುಚ್ಚಪ್ಪ, ಇ. ಹನುಮಂತಪ್ಪ, ಪ್ರೇಮ್‌ಕುಮಾರ್, ಎಂ.ಡಿ. ಶೇಖರ್, ನಿವೇಶನ ದಾನಿ ಕೃಷ್ಣಮೂರ್ತಿ, ಕೆ.ಎಸ್. ಶಾಂತಮ್ಮ, ವೀರಭದ್ರಪ್ಪ, ನಿಂಗಪ್ಪ, ಗ್ರಾ.ಪಂ., ಶಾಲಾ ಸಮಿತಿ ಸದಸ್ಯರು, ಸಂಸ್ಥೆಯ ನಿವೃತ್ತ ಶಿಕ್ಷಕರು, ಶಾಲಾ ಶಿಕ್ಷಕರು ಹಾಜರಿದ್ದರು.ಅಶ್ವಿನಿ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಎಚ್.ಎಂ. ಜಗದೀಶ್ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಬಿ. ಮಲ್ಲಿಕಾರ್ಜುನ್ ವಂದಿಸಿದರು. ನಿಂಗರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.