ADVERTISEMENT

ಹಸಿರುಮಕ್ಕಿ ಸೇತುವೆ ಸಮೀಕ್ಷೆ ಕಾರ್ಯ ಆರಂಭ

ಮನವಿಗೆ ಸ್ಪಂದಿಸಿದ ಕಾಗೋಡುಗೆ ಅಭಿನಂದನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 11:13 IST
Last Updated 15 ಜೂನ್ 2013, 11:13 IST

ಹೊಸನಗರ: ಆರು ದಶಕಗಳ ವರ್ಷಗಳ ಬೇಡಿಕೆಯಾದ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆ ಸಮೀಕ್ಷೆ ಕಾರ್ಯ ವನ್ನು ಗುರುವಾರ ಆರಂಭಿಸಿರುವುದು ಗ್ರಾಮಸ್ಥರಿಗೆ ಸಂತಸ ತಂದಿದೆ.

ಸಾಗರ-ಹೊಸನಗರ-ನಿಟ್ಟೂರು- ಕೊಲ್ಲೂರು ಸಂಪರ್ಕದ ಶರಾವತಿ ಹಿನ್ನೀರಿನ ಹಸಿರುಮಕ್ಕಿ ಸೇತುವೆ ನಿರ್ಮಾಣ ಕುರಿತಂತೆ ಸ್ಪೀಕರ್ ಕಾಗೋಡು ತಿಮ್ಮಪ್ಪ ಭಾನುವಾರ ನಿಟ್ಟೂರಿನಲ್ಲಿ ನಡೆದ ಸಭೆಯಲ್ಲಿ ಭರವಸೆ ನೀಡಿದ್ದರು.

ಸ್ಪೀಕರ್ ಸೂಚನೆಯ ಮೇರೆಗೆ ಲೋಕೋಪ ಯೋಗಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ಕಾಂತರಾಜ್ ನೇತೃತ್ವದ ತಂಡವು ಗುರುವಾರ ಸಮೀಕ್ಷೆ  ಕಾರ್ಯ ಆರಂಭಿಸಿದೆ.

ಹಸಿರುಮಕ್ಕಿ ಹೊಳೆಯ ದಡದಿಂದ ದಡಕ್ಕೆ ಸುಮಾರು 1200 ಮೀಟರ್ ಹಾಗೂ ಅಲ್ಲಿಂದ 1 ಕಿ.ಮೀ ದೂರದ ಇನ್ನೊಂದು ಪ್ರದೇಶದಲ್ಲಿ ಹೊಳೆಯು  ಸುಮಾರು 800 ಮೀಟರ್ ಅಗಲ ಇದೆ ಎಂದು ಅಂದಾಜಿಸಲಾಗಿದೆ.

ಈ ಸೇತುವೆ ನಿರ್ಮಾಣದಿಂದ ಕೊಲ್ಲೂರು, ಕೊಡಚಾದ್ರಿ ಪ್ರವಾಸಿಗರಿಗೆ ಸುಮಾರು 50ಕ್ಕೂ ಹೆಚ್ಚು  ಕಿ.ಮೀ ಸಮೀಪ ಆಗಬಲ್ಲದು. ಅಲ್ಲದೇ  ನಿಟ್ಟೂರು, ಸಂಪೆಕಟ್ಟೆ, ಎಸ್‌ಎಸ್ ಭೋಗ್, ಕೊಲ್ಲೂರು, ಬೈಂದೂರು, ಮತ್ತಿಮನೆ ಗ್ರಾಮ ಪಂಚಾಯ್ತಿಯ ಸಾವಿರಾರು ಕುಟುಂಬಗಳು ಸಾಗರ ಹಾಗೂ ಶಿವಮೊಗ್ಗಕ್ಕೆ ಬರಲು ಲಾಂಚ್ ಪ್ರಯಾಣ ಅಂತ್ಯವಾಗಬಲ್ಲದು ಎಂಬುದು ಗ್ರಾಮಸ್ಥರ ಅಭಿಪ್ರಾಯ. 

ಗ್ರಾಮಸ್ಥರ ಮನವಿಗೆ ಕೂಡಲೇ ಸ್ಪಂದಿಸಿ ಸಮೀಕ್ಷೆ  ಕಾರ್ಯಕ್ಕೆ ಸೂಚನೆ ನೀಡಿದ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರನ್ನು ಗ್ರಾಮಸ್ಥರಾದ ಚಂದ್ರಶೇಖರ ಶೆಟ್ಟಿ, ಎ.ಒ. ರಾಮಚಂದ್ರ, ಕೂಡ್ಲುಕೊಪ್ಪ ಸುರೇಶ್, ದೊಡ್ಮನೆ ಲಕ್ಷನಾರಾಯಣ್,  ಶ್ರೀಕಾಂತ್ ಸೇರಿದಂತೆ ನಿಟ್ಟೂರು ಮತ್ತಿತರರು ಈ ಸಂದರ್ಭದಲ್ಲಿ  ಅಭಿನಂದಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.