ADVERTISEMENT

ಹೊಸನಗರ: ಮರೆತ ಗಾಂಧಿ ಅಹಿಂಸಾ ತತ್ವ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2011, 6:20 IST
Last Updated 3 ಅಕ್ಟೋಬರ್ 2011, 6:20 IST

ಹೊಸನಗರ: ಅಹಿಂಸಾ ಪ್ರತಿಪಾದಕ ಮಹಾತ್ಮಾ ಗಾಂಧಿ ಜಯಂತಿಯಂದು ಹೊಸನಗರ ಪಟ್ಟಣ ಪಂಚಾಯ್ತಿಯ ಮೀನು, ಮಾಂಸ, ಚಿಕನ್ ಮಳಿಗೆಗಳಲ್ಲಿ ಎಂದಿನಂತೆ ವ್ಯಾಪಾರ ನಡೆಯಿತು.

ಗಾಂಧಿ ಜಯಂತಿಯ ದಿನ ಮದ್ಯ ಹಾಗೂ ಮಾಂಸದ ಅಂಗಡಿಗಳು ಬಂದ್ ಮಾಡಬೇಕು ಎಂಬ ನಿಯಮ ಹೊಸನಗರದ ಮಟ್ಟಿಗೆ ಕಡ್ಡಾಯವಾಗಿ ಆಗಿಲ್ಲ ಎಂಬುದು ಸಾರ್ವಜನಿಕರ ದೂರು.

ಅಬಕಾರಿ ಇಲಾಖೆಯು ಮದ್ಯದ ಅಂಗಡಿಗಳ ಮುಂದಿನ ಬಾಗಿಲು ಬಂದ್ ಮಾಡಿ ಸೀಲ್ ಹಾಕಿತ್ತು. ಕುಡುಕರು ಮಾತ್ರ ಹಿಂದಿನ ಬಾಗಿಲು, ಕಿಟಕಿಗಳಿಗೆ ಲಗ್ಗೆ ಹಾಕಿ ತೂರಾಡುತ್ತಾ ಹೊರಬರುವ ದೃಶ್ಯ  ಸಾಮಾನ್ಯವಾಗಿತ್ತು.

ಆದರೆ, ಮೀನು, ಮಾಂಸ, ಚಿಕನ್ ಪಟ್ಟಣ ಪಂಚಾಯ್ತಿ ಅಧಿಕೃತ ಮಳಿಗೆಯ ವ್ಯಾಪಾರಿಗಳು ಮಾತ್ರ ಯಾವ ಅಡೆತಡೆ ಇಲ್ಲದೇ ವ್ಯಾಪಾರದಲ್ಲಿ ಮಗ್ನರಾಗಿದ್ದರು. ನಿಷೇಧದ ಬಗ್ಗೆ ತಮಗೆ ಗೊತ್ತಿಲ್ಲ. ಯಾವುದೇ, ಸೂಚನೆ ಇಲ್ಲ ಎಂಬುದು ವ್ಯಾಪಾರಿಗಳ ಅಹವಾಲು.

ಭಾನುವಾರದ ವಿಶೇಷ  ಖಾದ್ಯಕ್ಕಾಗಿ ಬಹುತೇಕ ಮಾಂಸಾಹಾರಿ ಗಿರಾಕಿಗಳಿಗೆ ಗಾಂಧಿ ಜಯಂತಿಯಂದು ಮಾಂಸ ಮಾರಾಟದ ನಿಷೇಧದ ಅರಿವು ಇಲ್ಲ ಎಂದು ವ್ಯಕ್ತಪಡಿಸಿದರು.

ಕಾಟಾಚಾರದ ಆಚರಣೆ: ಭಾನುವಾರದ ರಜೆಯ ಮಜದಲ್ಲಿದ್ದ ಬಹುತೇಕ ಸರ್ಕಾರಿ ಕಚೇರಿಯ ಹಿರಿಯ ಅಧಿಕಾರಿಗಳು ಗಾಂಧಿ ಜಯಂತಿ ಆಚರಣೆಯಲ್ಲಿ ಗೈರು ಆಗಿದ್ದರು. ಡಿ ದರ್ಜೆ ನೌಕರರು ಬೆಳಿಗ್ಗೆ 9ಕ್ಕೆ ಗಾಂಧಿ ಫೋಟೊ ಇಟ್ಟು ಒಂದಷ್ಟು ಹೂವು ಹಾಕಿ ಪೂಜೆಮಾಡಿದ ಪ್ರಸಂಗ ಸರ್ವೆ ಸಾಮಾನ್ಯವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.