ADVERTISEMENT

‘ಅನ್ನಭಾಗ್ಯ’ ಅಕ್ಕಿ ಮಿಲ್‌ನಲ್ಲಿ ಪತ್ತೆ!

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:57 IST
Last Updated 20 ಸೆಪ್ಟೆಂಬರ್ 2013, 8:57 IST

ಶಿವಮೊಗ್ಗ: ‘ಅನ್ನಭಾಗ್ಯ’ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಣೆ ಮಾಡಬೇಕಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪಡಿತರ ಅಕ್ಕಿ ದಾಸ್ತಾನನ್ನು ನಗರದ ರೈಸ್‌ಮಿಲ್‌ ಒಂದರಲ್ಲಿ ಪೊಲೀಸರು ಗುರುವಾರ ಪತ್ತೆ ಮಾಡಿದ್ದಾರೆ.

ನಗರದ ಬೈಪಾಸ್ ರಸ್ತೆಯ ಶಿವಶಂಕರ್ ರೈಸ್‌ಮಿಲ್‌ ಗೋದಾಮಿನಲ್ಲಿ ಈ ಪಡಿತರ ಅಕ್ಕಿ ದಾಸ್ತಾನು ಮಾಡಲಾಗಿತ್ತು. ಖಚಿತ ವರ್ತಮಾನದ ಮೇರೆಗೆ ದೊಡ್ಡಪೇಟೆ ಠಾಣೆ ಇನ್‌ಸ್ಪೆಕ್ಟರ್‌ ಗಿರೀಶ್, ಸಬ್ ಇನ್‌ಸ್ಪೆಕ್ಟರ್‌ ಸಿ.ಜೆ.ಚೈತನ್ಯ ಹಾಗೂ ಸಿಬ್ಬಂದಿ ದಾಳಿ ನಡೆಸಿ, ಗೋದಾಮು ಹಾಗೂ ಮಿಲ್ ಆವರಣದಲ್ಲಿ ನಿಲ್ಲಿಸಿದ್ದ ಲಾರಿಯಲ್ಲಿ ತಲಾ 50 ಕೆ.ಜಿ. ತೂಕದ ಸುಮಾರು 395 ಚೀಲ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದಿದ್ದಾರೆ. ಅದರ ಮೌಲ್ಯ ಸುಮಾರು ` 3.15 ಲಕ್ಷ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರೈಸ್‌ ಮಿಲ್‌ ಮಾಲಿಕ ಉಮಾಪತಿ, ಕರ್ನಾಟಕ ರಾಜ್ಯ ಆಹಾರ ನಿಗಮದ ಅಧಿಕಾರಿ ವೀರಭದ್ರಪ್ಪ, ಲಾರಿ ಚಾಲಕ ರಫೀಕ್ ಪಾಷಾ ಎಂಬುವರ ವಿರುದ್ಧ ದೊಡ್ಡಪೇಟೆ ಠಾಣೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.