ADVERTISEMENT

‘ಡಿಸೋಜ ಸಾಹಿತ್ಯದಲ್ಲಿ ಬದುಕಿನ ಸತ್ಯಗಳ ಅನಾವರಣ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 7:02 IST
Last Updated 10 ಡಿಸೆಂಬರ್ 2013, 7:02 IST

ಸಾಗರ: ನಾ.ಡಿಸೋಜ ಅವರು ತಮ್ಮ ಸಾಹಿತ್ಯದ ಮೂಲಕ ಬದುಕಿನ ಸತ್ಯಗಳನ್ನು ಅನಾವರಣ ಗೊಳಿಸಿದ್ದಾರೆ ಎಂದು ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್‌ ಹೇಳಿದರು.

ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘ ಈಚೆಗೆ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಡಿಕೇರಿಯಲ್ಲಿ ನಡೆಯಲಿರುವ 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾಹಿತಿ ನಾ.ಡಿಸೋಜ ಅವರನ್ನು ಅಭಿನಂದಿಸಿ ಮಾತನಾಡಿದರು.

ಪರಿಸರ–ಅಭಿವೃದ್ಧಿ, ಆಧುನಿಕತೆ–ಸಂಪ್ರದಾಯ ಇವೇ ಮೊದಲಾದ ವಿಷಯಗಳ ನಡುವೆ ಡಿಸೋಜರ ಸಾಹಿತ್ಯದಲ್ಲಿ ಮುಖಾಮುಖಿ ನಡೆದಿದೆ. ಯಾವುದೆ ಒಂದು ಪಂಥಕ್ಕೆ ಸೇರದೆ ತಮ್ಮದೆ ಆದ ವೈಶಿಷ್ಟತೆಯನ್ನು ಕಾಪಾಡಿಕೊಂಡು ಬಂದಿರುವ ಕಾರಣಕ್ಕೆ ಅವರು ವಿಭಿನ್ನರಾಗಿ ಕಾಣುತ್ತಾರೆ ಎಂದು ಹೇಳಿದರು.

ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮ.ಸ.ನಂಜುಂಡಸ್ವಾಮಿ ಮಾತನಾಡಿದರು. ಅಭಿನಂದನೆ ಸ್ವೀಕರಿಸಿದ ಸಾಹಿತಿ ಡಾ.ನಾ.ಡಿಸೋಜ ಮಾತನಾಡಿ ಯಾವುದೆ ಭಾಷೆಯಲ್ಲಿ ಬರೆಯುವ ಲೇಖಕ ತನಗೆ ದೊರಕುವ ಗೌರವವನ್ನು ಭಾಷೆಗೆ ಸಲ್ಲುವ ಗೌರವ ಎಂದೆ ಭಾವಿಸಬೇಕು. ಅಂತೆಯೆ ನನಗೆ ಈ ಸಂದರ್ಭದಲ್ಲಿ ದೊರಕುತ್ತಿರುವ ಗೌರವವನ್ನು ಕನ್ನಡಕ್ಕೆ ದೊರಕುತ್ತಿರುವ ಮನ್ನಣೆ ಎಂದು ಭಾವಿಸುತ್ತಿರುವುದಾಗಿ ಹೇಳಿದರು.

ರಂಗಕರ್ಮಿ ಕಾಗೋಡು ಅಣ್ಣಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿಪ್ರ ನೌಕರರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಶ್ರೀಧರ್‌.ಆರ್.ಭಟ್‌ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ನ ಕಾರ್ಯದರ್ಶಿ ವಿ.ಶಂಕರ್‌, ಆರ್‌.ಅಚ್ಚುತ್‌ರಾವ್‌, ಅಶ್ವಿನಿಕುಮಾರ್‌, ಜಿ.ಎಸ್‌.ನಟೇಶ್‌ ಹಾಜರಿದ್ದರು. ಸುಭದ್ರಮ್ಮ ಪ್ರಾರ್ಥಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.