ADVERTISEMENT

‘ಬಸ್‌ ಬಿಡುವ ಮೊದಲು ಮಾರ್ಗ ಸಮೀಕ್ಷೆ ಮಾಡಿ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 7:09 IST
Last Updated 4 ಜನವರಿ 2014, 7:09 IST

ಶಿವಮೊಗ್ಗ: ಸರ್ಕಾರಿ ನಗರ ಸಾರಿಗೆ ಬಸ್‌ ಸೌಲಭ್ಯಕ್ಕೆ ತಮ್ಮ ವಿರೋಧವಿಲ್ಲ; ಆದರೆ, ಮಾರ್ಗಗಳ ವೈಜ್ಞಾನಿಕವಾಗಿ ಸಮೀಕ್ಷೆ ನಡೆಸಿ ಸರ್ಕಾರ ಬಸ್‌ಗಳನ್ನು ಬಿಡುವುದು ಒಳ್ಳೆಯದು ಎಂದು ನಗರ ಸಾರಿಗೆ ಬಸ್‌ ಮಾಲೀಕರ ಸಂಘ ಮನವಿ ಮಾಡಿದೆ.

ಪ್ರಸ್ತುತ ನಗರದಲ್ಲಿ 65 ಖಾಸಗಿ ನಗರ ಸಾರಿಗೆ ಬಸ್‌ಗಳು ಕಾರ್ಯ ನಿರ್ವಹಿಸುತ್ತಿವೆ. ಬಸ್‌ಗಳಲ್ಲಿ ಹಲವರು ಚಾಲಕ, ನಿರ್ವಾಹಕ, ಕ್ಲಿನರ್‌ಗಳಾಗಿ ಬದುಕು ಕಟ್ಟಿಕೊಂಡಿದ್ದಾರೆ. ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ಏಕಾಏಕಿ ಖಾಸಗಿ ನಗರ ಸಾರಿಗೆ ಮಾರ್ಗದಲ್ಲೇ ಮತ್ತೆ 65 ಬಸ್‌ ಬಿಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಇದರಿಂದ ಸಾರ್ವಜನಿಕರಿಗೆ ಅನಾನುಕೂಲವಾಗಲಿದೆ ಎಂದು ಸಂಘದ ಗೌರವಾಧ್ಯಕ್ಷ ಪಿ.ರುದ್ರೇಶ್‌ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾ ಯಪಟ್ಟರು.

ಸರ್ಕಾರಿ ಮತ್ತು ಖಾಸಗಿ ನಗರ ಸಾರಿಗೆ ಬಸ್‌ಗಳ ಮಧ್ಯೆ ನಿಗದಿತ ವೇಳಾಪಟ್ಟಿ ಪಡೆಯಲು ಅನವಶ್ಯಕ ಪೈಪೋಟಿಯಾಗಿ ಅಪಘಾತಗಳು ಸಂಭವಿಸುವ ಮತ್ತು ಆರ್ಥಿಕ ನಷ್ಟ ಸಂಭವಿಸುವ ಸಾಧ್ಯತೆ ಇದೆ ಎಂದರು.

ಗುಂಡಿ ಬಿದ್ದ, ಕಿರಿದಾದ ರಸ್ತೆ ಇರುವಾಗಲೂ ನಗರ ಖಾಸಗಿ ಬಸ್‌ ಸಾರಿಗೆ ಸೇವೆ ಸಲ್ಲಿಸಿದೆ. ಶಿವಮೊಗ್ಗದ ಬೆಳವಣಿಗೆಗೆ ತಮ್ಮದೇ ರೀತಿಯಲ್ಲಿ ಖಾಸಗಿ ಸಾರಿಗೆ ಸೇವೆ ಸಲ್ಲಿಸಿದೆ. ಸರ್ಕಾರ ಇವುಗಳನ್ನೆಲ್ಲವನ್ನೂ ಪರಿಗಣಿಸಬೇಕು ಎಂದು ಅವರು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಎಸ್.ವಿ.ರಾಘವೇಂದ್ರರಾವ್, ಕಾರ್ಯದರ್ಶಿ ಜಿ.ಮುರುಗೇಶ್, ಸಹಕಾರ್ಯದರ್ಶಿ ಪಾಲ್‌ ಗೋವಿಸ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.