ADVERTISEMENT

20ರಿಂದ ಚರಕ ಉತ್ಸವ-2012

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 8:00 IST
Last Updated 18 ಜನವರಿ 2012, 8:00 IST

ಸಾಗರ: ಸಮೀಪದ ಹೆಗ್ಗೋಡಿನ ಚರಕ ಸಂಸ್ಥೆ ಆವರಣದಲ್ಲಿಜ. 20ರಿಂದ 22ರವರೆಗೆ `ಚರಕ ಉತ್ಸವ-2012~ ನಡೆಯಲಿದೆ. ಬೆಂಗಳೂರಿನ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಕೇಂದ್ರ ಸಾಹಿತ್ಯ ಅಕಾಡೆಮಿ, ಕೇಂದ್ರ ಸಂಗೀತ ನಾಟಕ ವಿಭಾಗ ಹಾಗೂ ಚರಕ ಮಹಿಳಾ ಸಹಕಾರ ಸಂಘ ಇವುಗಳ ಸಂಯುಕ್ತ ಆಶ್ರಯದಲ್ಲಿ ಉತ್ಸವ ಏರ್ಪಾಟಾಗಿದೆ.

ಜ. 20ರಂದು ಬೆಳಿಗ್ಗೆ 10ಕ್ಕೆ ನೇಕಾರರ ಮತ್ತು ಕೊಡು- ಕೊಳ್ಳುವವರ ಸಮಾವೇಶ ಹೊನ್ನೆಸರದ ರಾಮದಾಸ್ ಕೈಮಗ್ಗ ಸಂಕೀರ್ಣದ ಆವರಣದಲ್ಲಿ ನಡೆಯಲಿದೆ. ಸಂಜೆ 6ಕ್ಕೆ ಸಾಹಿತಿ ಚಂದ್ರಶೇಖರ ಪಾಟೀಲ್ ಉತ್ಸವವನ್ನು ಉದ್ಘಾಟಿಸಲಿದ್ದಾರೆ. ಕಿರುತೆರೆ ನಿರ್ದೇಶಕ ಟಿ.ಎನ್. ಸೀತಾರಾಮ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ.

ನಂತರ, ಕೆ. ಯುವರಾಜ್ ಮತ್ತು ಸಂಗಡಿಗರಿಂದ ಜನಪದ ಗೀತ  ಗಾಯನ ಏರ್ಪಡಿಸಲಾಗಿದೆ.
ಜ. 21ರಂದು ಬೆಳಿಗ್ಗೆ 10.30ಕ್ಕೆ `ಲಂಕೇಶ್ ಮತ್ತು ನಾಡು-ನುಡಿ~ ಎಂಬ ವಿಷಯದ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಕಡಿದಾಳ್ ಶಾಮಣ್ಣ, ಶೂದ್ರ ಶ್ರೀನಿವಾಸ್, ಎಚ್.ಎಲ್. ಕೇಶವಮೂರ್ತಿ, ನಟರಾಜ್ ಹುಳಿಯಾರ್, ಕೆ.ವಿ. ಅಕ್ಷರ, ಸಬಿತಾ ಬನ್ನಾಡಿ, ವಿಠ್ಠಲ ಭಂಡಾರಿ, ಬಿ.ಟಿ. ಜಾಹ್ನವಿ, ಸಿರಾಜ್ ಅಹಮದ್, ಬಿ. ಚಂದ್ರೇಗೌಡ, ಶ್ರೀಪಾದಭಟ್ ಪಾಲ್ಗೊಳ್ಳಲಿದ್ದಾರೆ.

ಸಂಜೆ 6ಕ್ಕೆ ಲಂಕೇಶರ ಸಣ್ಣ ಕತೆ ಆಧರಿಸಿದ `ಕಲ್ಲು ಕರಗುವ ಸಮಯ~ ನಾಟಕವನ್ನು ಮೈಸೂರಿನ ಸುಮತಿ ಅವರ ನಿರ್ದೇಶನದಲ್ಲಿ ಚರಕ ಕಲಾವಿದರು ಅಭಿನಯಿಸಲಿದ್ದಾರೆ.

22ರಂದು ಬೆಳಿಗ್ಗೆ 10.30ಕ್ಕೆ ಲಂಕೇಶ್ ಕುರಿತ ವಿಚಾರ ಸಂಕಿರಣ ಮುಂದುವರಿಯಲಿದೆ. ಮಧ್ಯಾಹ್ನ 2.30ಕ್ಕೆ ಸಿದ್ದಲಿಂಗಯ್ಯ ಅವರ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದ್ದು ಸವಿತಾ ನಾಗಭೂಷಣ, ಲಲಿತಾ ಸಿದ್ದಬಸವಯ್ಯ, ಸುಬ್ಬು ಹೊಲೆಯಾರ್, ಜ.ನಾ.ತೇಜಶ್ರೀ, ಅಕ್ಷತಾ, ಮಾಧವಿ ಭಂಡಾರಿ ಭಾಗವಹಿಸಲಿದ್ದಾರೆ.

ಸಂಜೆ 6ಕ್ಕೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಸಮಾಜವಾದಿ ಚಿಂತಕ ರವಿವರ್ಮಕುಮಾರ್, ಪ. ಮಲ್ಲೇಶ್ ಪಾಲ್ಗೊಳ್ಳಲಿದ್ದಾರೆ. ನಂತರ ಕಾಸರಗೋಡು ಎಡನೀರು ಗೋಪಾಲಕೃಷ್ಣ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ತೆಂಕುತಿಟ್ಟಿನ ಯಕ್ಷಗಾನ `ಪಂಚವಟಿ~ ಪ್ರದರ್ಶನಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.