ADVERTISEMENT

4 ಜವಳಿ ತರಬೇತಿ ಕೇಂದ್ರ: ವರ್ತೂರು

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2011, 10:00 IST
Last Updated 21 ಅಕ್ಟೋಬರ್ 2011, 10:00 IST

ಶಿವಮೊಗ್ಗ: ಜವಳಿ ಉದ್ಯಮಕ್ಕೆ ಜಿಲ್ಲೆಯಲ್ಲಿ ಅಪಾರವಾದ ಅವಕಾಶಗಳಿದ್ದು, ಶಾಹಿ ಎಕ್ಸ್‌ಪೋರ್ಟ್ ಆರಂಭಿಸಲಿರುವ ಬೃಹತ್ ಉದ್ದಿಮೆಗೆ 10 ಸಾವಿರ ಉದ್ಯೋಗಿಗಳ ಬೇಡಿಕೆ ಇರುವುದರಿಂದ ಜವಳಿ ಇಲಾಖೆಯಿಂದ ತರಬೇತಿ ಕೊಡಿಸಲಾಗುವುದಲ್ಲದೇ, ಜಿಲ್ಲೆಯ ನಾಲ್ಕು ಕಡೆ ತರಬೇತಿ ಕೇಂದ್ರಗಳನ್ನು ಆರಂಭಿಸಲಾಗುವುದು ಎಂದು ಜವಳಿ ಸಚಿವ ಆರ್. ವರ್ತೂರು ಪ್ರಕಾಶ್ ಭರವಸೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಜವಳಿ ಮತ್ತು ಕೈಮಗ್ಗ ಇಲಾಖೆ ಅ. 20ರಿಂದ 26ರವರೆಗೆ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಜವಳಿ ಉದ್ಯಮದಲ್ಲಿ ಉದ್ಯೋಗಿಗಳಿಗೆ ಬೇಡಿಕೆ ಇರುವುದರಿಂದ ರಾಜ್ಯದಲ್ಲಿ 90 ತರಬೇತಿ ಕೇಂದ್ರಗಳನ್ನು ಆರಂಭಿಸಲಾಗಿದೆ. ಈ ಕೇಂದ್ರಗಳಲ್ಲಿ ತರಬೇತಿ ಪಡೆದವರಿಗೆ ಸರ್ಟಿಫಿಕೇಟ್ ನೀಡುವುದರ ಜತೆಗೆ ತರಬೇತಿ ಅವಧಿಯಲ್ಲಿ ರೂ. 2 ಸಾವಿರ ಪ್ರೋತ್ಸಾಹಧನ ನೀಡಲಾಗುವುದು ಎಂದರು.

ಕೆಲವೊಂದು ಕಾರಣಗಳಿಂದಾಗಿ ರಾಜ್ಯದಲ್ಲಿ ಮುಚ್ಚಿರುವ ರೋಗಗ್ರಸ್ತ ನೂಲಿನ ಗಿರಣಿಗಳನ್ನು ಪುನಶ್ಚೇತನಗೊಳಿಸಲು ಸರ್ಕಾರ ರೂ.12 ಕೋಟಿ ಯೋಜನೆ ರೂಪಿಸಿದೆಎಂದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಶಾಸಕ ಕೆ.ಎಸ್. ಈಶ್ವರಪ್ಪ, ಮಹಿಳೆಯರು ಶ್ರಮಪಟ್ಟು ತರಬೇತಿ ಪಡೆದರೆ ಆತ್ಮಸ್ಥೈರ್ಯದಿಂದ ಬದುಕುವ ದಾರಿ ಕಂಡುಕೊಳ್ಳಬಹುದು ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರಪ್ಪ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಸಂಜಯ್ ಬಿಜ್ಜೂರ್, ಉಪ ಕಾರ್ಯದರ್ಶಿ ರಾಜ್‌ಗೋಪಾಲ್ ಉಪಸ್ಥಿತರಿದ್ದರು. ಜವಳಿ ಇಲಾಖೆ ಉಪ ನಿರ್ದೇಶಕ ಶ್ರೀನಿವಾಸ್ ಸ್ವಾಗತಿಸಿದರು. ಪ್ರಾಂಶುಪಾಲ ವಿದ್ಯಾಶಂಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.