ತೀರ್ಥಹಳ್ಳಿ: ಮೆಸ್ಕಾಂನ 11 ಕೆ.ವಿ ವಿದ್ಯುತ್ ತಂತಿ ಮೇಲೆ ಕೆಪಿಟಿಸಿಎಲ್ನ ಜೋಗ ಮಾರ್ಗದ ವಿದ್ಯುತ್ ವಾಹಕ ತಂತಿ ಬಿದ್ದ ಪರಿಣಾಮ ಗುರುವಾರ ತಾಲ್ಲೂಕಿನ ಗಬಡಿ ಗ್ರಾಮದಲ್ಲಿನ ಅನೇಕ ಮನೆಗಳಲ್ಲಿನ ವಿದ್ಯುತ್ ಸಾಮಗ್ರಿಗೆ ಹಾನಿ ಉಂಟಾಗಿದೆ.
ಜನರು ಪ್ರಾಣಹಾನಿಯಿಂದ ತಪ್ಪಿಸಿಕೊಂಡು ನಿಟ್ಟುಸಿರು ಬಿಟ್ಟಿದ್ದಾರೆ. ವಿದ್ಯುತ್ ತಂತಿ ಬಿದ್ದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಕೆಪಿಟಿಸಿಎಲ್ ಸಹಾಯಕ ಎಂಜಿನಿಯರ್ ಫರ್ನಾಂಡೀಸ್ ದುರಸ್ತಿ ಕಾರ್ಯದ ಕುರಿತು ಸ್ಥಳೀಯರಿಗೆ ಭರವಸೆ ನೀಡಿದರು.
ಹಾನಿಗೆ ಪರಿಹಾರ ಘೋಷಿಸದೇ ದುರಸ್ತಿ ಕಾರ್ಯ ಕೈಗೊಳ್ಳಬಾರದು. ಕೆಪಿಟಿಸಿಎಲ್ ವಿದ್ಯುತ್ ವಾಹಕ ತಂತಿ ನಿರ್ವಹಣೆಯಲ್ಲಿ ತೋರಿದ ನಿರ್ಲಕ್ಷ್ಯದಿಂದ ಅನಾಹುತ ಸಂಭವಿಸಿದೆ. 30ಕ್ಕೂ ಹೆಚ್ಚು ಮನೆಗಳಲ್ಲಿನ ವಿದ್ಯುತ್ ಸಾಮಗ್ರಿ ಹಾಳಾಗಿವೆ. ಸಾರ್ವಜನಿಕರ ಜೀವಕ್ಕೆ ಅಪಾಯ ಉಂಟಾಗಿದ್ದರೆ ಹೊಣೆ ಯಾರು ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.
ಮೆಸ್ಕಾಂನ ಮಂಡಗದ್ದೆ ಶಾಖೆ ಎಂಜಿನಿಯರ್ ಅವರನ್ನು ಸ್ಥಳಕ್ಕೆ ಕಳುಹಿಸಿ ಹಾನಿ ಸಂಬಂಧ ಮಾಹಿತಿ ಸಂಗ್ರಹಿಸಿ ವರದಿ ನೀಡಲಾಗುತ್ತದೆ ಎಂದು ತೀರ್ಥಹಳ್ಳಿ ಮೆಸ್ಕಾಂ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಮಧು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.