ಶಿಕಾರಿಪುರ: ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದಲ್ಲಿ ನಡೆಯುವ ಮೈಲಾರಲಿಂಗೇಶ್ವರ ದೇವರ ಜಾತ್ರಾ ಮಹೋತ್ಸವ ಹಾಗೂ ಕಾರ್ಣಿಕೋತ್ಸವ ವೀಕ್ಷಿಸಲು ಮಂಗಳವಾರ ಎತ್ತಿನ ಬಂಡಿ ಹಾಗೂ ಟಿಲ್ಲರ್ಗಳಲ್ಲಿ ಪಟ್ಟಣದ ಭಕ್ತರು ತೆರಳಿದರು.
ಬೆಳಿಗ್ಗೆ ಅಲಂಕಾರಿಕ ವಸ್ತುಗಳಿಂದ ಎತ್ತಿನ ಬಂಡಿ ಹಾಗೂ ಹೋರಿಗಳನ್ನು ಸಿಂಗರಿಸಿಕೊಂಡು ಪಟ್ಟಣದ ಹೊರಭಾಗದಲ್ಲಿರುವ ಶಿಭಾರಕ್ಕೆ ಭೇಟಿ ನೀಡಿದ ಭಕ್ತರು ಶಿಭಾರಕ್ಕೆ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಮೈಲಾರಲಿಂಗ ದೇವರ ಹೊರೆ ಹೊತ್ತ ಗೊರವಯ್ಯರು ಹಾಗೂ ಮಹಿಳೆಯರು ದೇವರಿಗೆ ಜಯಘೋಶ ಹಾಕುವ ಮೂಲಕ ಎತ್ತಿನ ಬಂಡಿ ಪಯಣಕ್ಕೆ ಚಾಲನೆ ನೀಡಿದರು.
ಮೈಲಾರಲಿಂಗೇಶ್ವರ ಜಾತ್ರೆ ವೀಕ್ಷಿಸಲು ಒಂದು ವಾರಕ್ಕೂ ಹೆಚ್ಚು ದಿನ ಪಯಣ ಬೆಳೆಸುವ ಸಂಪ್ರದಾಯವನ್ನು ಹಲವು ವರ್ಷಗಳಿಂದ ಪಟ್ಟಣದ ಭಕ್ತರು ಆಚರಿಸಿಕೊಂಡು ಬಂದಿದ್ದಾರೆ.
ಫೆ. 3ರಂದು ಮೈಲಾರದಲ್ಲಿ ನಡೆಯುವ ಕಾರ್ಣಿಕೋತ್ಸವವನ್ನು ವೀಕ್ಷಿಸುವ ಭಕ್ತರು ನಂತರ ಕೆಲ ದಿನ ಮೈಲಾರದಲ್ಲಿ ನೆಲೆಸಿ, ವಿಶೇಷ ಪೂಜೆ ಸಲ್ಲಿಸಿ ಶಿಕಾರಿಪುರಕ್ಕೆ ಹಿಂತಿರುಗಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.