ಶಿರಾಳಕೊಪ್ಪ:ಪಟ್ಟಣದ ವ್ಯಾಪ್ತಿಯಲ್ಲಿ 50 ಎಕರೆ ಜಮೀನು ಗುರುತಿಸಿ ನಿವೇಶನ ರಹಿತರಿಗೆ ವಿತರಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಪಟ್ಟಣದಲ್ಲಿ ಈಚೆಗೆ ₹ 92 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗಿರುವ
ಆಲಂಕಾರಿಕ ಬೀದಿ ದೀಪಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ತಾಲ್ಲೂಕು ಕೇಂದ್ರಗಳಿಗೆ ಸಿಗುವ ಸೌಲಭ್ಯಕ್ಕಿಂತ ಹೆಚ್ಚಿನ ಅನುಕೂಲವನ್ನು ಪಟ್ಟಣದ ನಾಗರಿಕರಿಗೆ ಮಾಡಿಕೊಡಲಾಗಿದೆ. ಸರ್ಕಾರದಿಂದ ಇನ್ನೂ ಹೆಚ್ಚಿನ ಅನುದಾನಗಳು ಲಭಿಸಲಿ ಎಂಬ ಸದುದ್ದೇಶದಿಂದ ಪಟ್ಟಣ ಪಂಚಾಯಿತಿಗೆ ತಡಗಣಿ, ಬೆಲವಂತನಕೊಪ್ಪ, ನೇರಲಗಿ ಸೇರಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ ಎಂದರು.
ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಗಮನಹರಿಸಬೇಕಿಲ್ಲ. ಭವಿಷ್ಯದ ಬಗ್ಗೆ ಆಲೋಚಿಸಿ. ಎಲ್ಲಾ ಸೌಕರ್ಯಗಳನ್ನು ಗ್ರಾಮಗಳಿಗೂ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಕೆ.ಎಸ್. ಗುರುಮೂರ್ತಿ, ‘ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಬೇರೆ ರಾಜಕಾರಣಿಗಳ ರೀತಿ ಅಭಿವೃದ್ಧಿಯ ಬಗ್ಗೆ ಭಾಷಣ ಮಾಡಿ ಹೋಗುತ್ತಿಲ್ಲ. ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅದಕ್ಕೆ ಅಭಿವೃದ್ಧಿ ಕಾರ್ಯಗಳು ಸಾಕ್ಷಿಯಾಗಿವೆ’ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಂಕ್ ಅಧ್ಯಕ್ಷ ಚನ್ನವೀರಪ್ಪ, ಗೃಹ ಮಂಡಳಿ ನಿರ್ದೇಶಕ ಅಗಡಿ ಅಶೋಕ್, ಪಟ್ಟಣ ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ರಾಜು, ಉಪಾಧ್ಯಕ್ಷ ರಾಜೇಶ್ವರಿ ವಸಂತ, ಮುಖ್ಯಾಧಿಕಾರಿ ಹೇಮಂತ, ಭೋವಿ ನಿಗಮದ ನಿರ್ದೇಶಕ ಸಣ್ಣ ಹನುಮಂತಪ್ಪ, ಕಾರ್ಯಪಾಲಕ ಎಂಜಿನಿಯರ್ ಆನಂದ್, ಬಿಜೆಪಿ ನಗರ ಘಟಕದ ಅಧ್ಯಕ್ಷ ಮಂಚಿ ಶಿವಣ್ಣ ಹಾಗೂ ಸದಸ್ಯರು ಇದ್ದರು.
ಎಂಜಿನಿಯರ್ ಕಾಂತೇಶ್ ನಿರೂಪಿಸಿದರು. ಆಶಾ ಮಂಜುನಾಥ ಪ್ರಾರ್ಥಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.