ADVERTISEMENT

ಹೊಸನಗರ: ಪಾಳುಬಿದ್ದ ಸರ್ಕಾರಿ ವಸತಿ ಗೃಹಗಳು..!

ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಜನ; ನೆಲಸಮಗೊಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2025, 5:38 IST
Last Updated 15 ಆಗಸ್ಟ್ 2025, 5:38 IST
ಹೊಸನಗರ ಪಟ್ಟಣದಲ್ಲಿನ ಪಾಳುಬಿದ್ದ ವಸತಿ ಗೃಹಗಳು
ಹೊಸನಗರ ಪಟ್ಟಣದಲ್ಲಿನ ಪಾಳುಬಿದ್ದ ವಸತಿ ಗೃಹಗಳು   

ಹೊಸನಗರ: ಸರ್ಕಾರಿ ನೌಕರರಿಗೆ ಹಾಗೂ ವಿವಿಧ ಇಲಾಖೆಗಳ ನೌಕರರಿಗೆ ಉಪಯೋಗವಾಗಲೆಂದು ಕಟ್ಟಿಸಿರುವ ನಗರದಲ್ಲಿ ಕಟ್ಟಿಸಿರುವ ಸರ್ಕಾರಿ ವಸತಿಗೃಹಗಳು ಪಾಳು ಬಿದ್ದಿವೆ.

ಪಟ್ಟಣದಲ್ಲಿನ ಬಹಳಷ್ಟು ಸರ್ಕಾರಿ ವಸತಿ ಗೃಹಗಳು ದುರಸ್ತಿ ಕಾಣದೆ ನಾಮಾವಶೇಷ ಹೊಂದುತ್ತಿವೆ. ದಿಕ್ಕು–ದೆಸೆ ಇಲ್ಲದೇ ಅನಾಥವಾಗಿ,  ಶಿಥಿಲವಾಸ್ಥೆ ತಲುಪಿರುವ ಈ ವಸತಿ ಗೃಹಗಳು ಸಾಂಕ್ರಾಮಿಕ ರೋಗಗಳ ಆವಾಸ ಸ್ಥಾನವಾಗಿ ಮಾರ್ಪಟ್ಟಿವೆ. ಇದರಿಂದ ಸಹಜವಾಗಿಯೇ ಸುತ್ತಮುತ್ತಲಿನ ನಿವಾಸಿಗಳಲ್ಲಿ ಭೀತಿ ಮನೆ ಮಾಡಿದೆ.

ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ 3ನೇ ವಾರ್ಡ್‌ ವ್ಯಾಪ್ತಿಯ ಲೋಕೋಪಯೋಗಿ ಇಲಾಖೆ ವಸತಿಗೃಹಗಳು ದುಃಸ್ಥಿತಿಯಲ್ಲಿವೆ. ಇವು ದುರವಸ್ಥೆ ತಲುಪಿ ಹತ್ತಾರು ವರ್ಷಗಳೇ ಆಗಿದ್ದು, ಪಾಳುಬಿದ್ದು, ಈಗಾಗಲೇ ಹಲವು ವರ್ಷಗಳೇ ಕಳೆದಿವೆ. ಒಂದು ಕಾಲದಲ್ಲಿ ಸಕಲ ಸವಲತ್ತು ಹೊಂದಿರುವ ಐಶಾರಾಮಿ ಮನೆಗಳನ್ನು ಇಂದು ಕೇಳುವವರಿಲ್ಲದಂತಾಗಿದೆ.

ADVERTISEMENT

ವಸತಿಗೃಹಗಳ ಸುತ್ತಮುತ್ತ ಬೃಹತ್ ಗಾತ್ರದ ಗಿಡಮರಗಳು ಬೆಳೆದುನಿಂತಿವೆ. ಕಟ್ಟಡದ ಗೋಡೆಗಳು, ಹೆಂಚುಗಳು ಬಿದ್ದು ಹೋಗಿದ್ದು  ಒಳಗೆ ನೀರು ನಿಂತು ಕೊಳೆತು ನಾರುವ ಸ್ಥಿತಿ ತಲುಪಿವೆ. ಪಟ್ಟಣದ ಹೃದಯ ಭಾಗದಲ್ಲಿರುವ ಈ ವಸತಿಗೃಹಗಳು ಸಾಂಕ್ರಾಮಿಕ ರೋಗ ಹರಡುತ್ತಿವೆ. ಈ ಶಿಥಿಲಗೊಂಡ ಮನೆಗಳ ಸುತ್ತಮುತ್ತ ಖಾಸಗಿಯವರ ಮನೆಗಳಿವೆ.

ಪಾಳುಬಿದ್ದ ವಸತಿ ಗೃಹಗಳ ಕುರಿತು ಇಲ್ಲಿನ ನಿವಾಸಿಗಳು ಹಾಗೂ ಸ್ಥಳೀಯ ಪ್ರತಿನಿಧಿಗಳು ಹತ್ತಾರು ಬಾರಿ ಮನವಿ ಸಲ್ಲಿಸಿದ್ದಾರೆ. ಆದರೆ, ತಾಲ್ಲೂಕು ಆಡಳಿತ ಮಾತ್ರ ಗಮನ ಹರಿಸಿಲ್ಲ. ಸಂಬಂಧಪಟ್ಟ ಇಲಾಖೆ ಈವರೆಗೆ ಅವುಗಳ ದುರಸ್ತಿಗಾಗಲೀ ಅಥವಾ ನೆಲಸಮಗೊಳಿಸುವ ಕೆಲಸಕ್ಕಾಗಲೀ ಮುಂದಾಗುತ್ತಿಲ್ಲ. ಅಧಿಕಾರಿಗಳ ಇಂತಹ ಧೋರಣೆ ಈ ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಹಾವುಗಳ ವಾಸಸ್ಥಾನ: ‘ಪಾಳು ಬಿದ್ದ ಈ ಹಳೆಯ ಕಟ್ಟಡದ ಸುತ್ತಮುತ್ತ ಗಿಡ– ಮರ, ಪೊದೆ ಬೆಳೆದುನಿಂತಿದೆ. ಮುರುಕು ಮನೆಗಳು ಹಾವುಗಳ ವಾಸಸ್ಥಾನ ಆಗಿದೆ. ನಾಗರ ಹಾವು, ಕಾಳಿಂಗ ಸರ್ಪಗಳು ಇಲ್ಲಿ ಬೀಡು ಬಿಟ್ಟಿವೆ. ಹಾವುಗಳು ಅಕ್ಕಪಕ್ಕದ ಮನೆಗೆ ಬಂದ ಉದಾಹರಣೆ ಸಾಕಷ್ಟಿದೆ. ಕೂಡಲೇ ತಾಲ್ಲೂಕು ಆಡಳಿತ ಈ ಪಾಳು ಬಿದ್ದ ಮನೆಗಳನ್ನು ನೆಲಸಮಗೊಳಿಸಬೇಕು ಎಂಬುದು ಸ್ಥಳೀಯರ ಒತ್ತಾಯವಾಗಿದೆ.

ನೀರು ತರಲು ಭಯ: ಪಾಳುಬಿದ್ದ ವಸತಿ ಗೃಹಗಳು ಇರುವ ಪ್ರದೇಶದಲ್ಲಿ ಕುಡಿಯುವ ನೀರಿನ ಮೂರು ಬಾವಿಗಳಿವೆ. ಸ್ಥಳೀಯ ನಿವಾಸಿಗಳಿಗೆ ಇದೆ ನೀರಿನ ಆಸರೆಯಾಗಿದೆ. ಆದರೆ, ನೀರು ತರಲು ಜನರು ಭಯಪಡುವ ವಾತಾವರಣ ಇಲ್ಲಿದೆ.

ವಸತಿ ಗೃಹಗಳ ಒಳಭಾಗದ ನೋಟ
ಹೊಸನಗರ ಪಟ್ಟಣದ ಸರ್ಕಾರಿ ವಸತಿಗೃಹಗಳು ಪಾಳು ಬಿದ್ದಿರುವುದು 
ಇಲ್ಲಿನ ಶಿಥಿಲಗೊಂಡ ಮನೆಗಳನ್ನು ಸ್ವಚ್ಛಗೊಳಿಸಲು ಅಥವಾ ನೆಲಸಮಗೊಳಿಸಲು ಈಗಾಗಲೇ ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದು ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ
ಸಿಂಥಿಯಾ ಸೆರಾವ್ ಸದಸ್ಯ ಪಟ್ಟಣ ಪಂಚಾಯಿತಿ
ವಸತಿಗೃಹಗಳ ಸ್ಥಿತಿ ಗಮನಕ್ಕೆ ಬಂದಿದೆ. ಇಲ್ಲಿರುವ ಕಟ್ಟಡವನ್ನು ನೆಲಸಮಗೊಳಿಸಿ ಹೊಸ ಕಟ್ಟಡ ಕಟ್ಟಲು ಅನುದಾನ ಇಲ್ಲ. ಈ ಬಗ್ಗೆ ಮೇಲಧಿಕಾರಿಗಳಿಗೆ ಪತ್ರ ಬರೆಯಲಾಗಿದೆ
ನರೇಂದ್ರ ಕುಮಾರ್ ಇಒ ತಾ.ಪಂ ಹೊಸನಗರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.