ಹೊಳೆಹೊನ್ನೂರು: ‘ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗಾಗಿ ಮೀಸಲಾದ ₹ 350 ಕೋಟಿ ಅನುದಾನದಲ್ಲಿ ₹ 80 ಕೋಟಿ ಮಾತ್ರ ಬಿಡುಗಡೆಯಾಗಿದ್ದು, ಉಳಿದ ಹಣವನ್ನು ಶೀಘ್ರ ಬಿಡುಗಡೆ ಮಾಡಿಸಲಾಗುವುದು’ ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದರು.
ಸಮೀಪದ ಆನವೇರಿ ಹಿರಿ ಮಾವುರದಮ್ಮ ದೇವಸ್ಥಾನದ ಪಕ್ಕದಲ್ಲಿ ನಿರ್ಮಾಣವಾಗಿರುವ ತಡೆಗೋಡೆ ಕಾಮಗಾರಿಯನ್ನು ಶುಕ್ರವಾರ ಪರಿಶೀಲಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ವಿಮಾನ ನಿಲ್ದಾಣ, ರಸ್ತೆ ಅಭಿವೃದ್ಧಿ ಕಾಮಗಾರಿ ಸೇರಿ ಹಲವು ಕಾಮಗಾರಿಗಳಿಗೆ ಹಣ ಬಿಡುಗಡೆಯಾಗಿಲ್ಲ. ಗುತ್ತಿಗೆದಾರರು ಕಾಮಗಾರಿಯನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವಂತಿಲ್ಲ. ಸರ್ಕಾರ ಇರುವವರೆಗೂ ಹಣದ ಚಿಂತೆ ಮಾಡಬೇಕಾಗಿಲ್ಲ ಎಂದರು.
ಆನವೇರಿಯ ತಡೆಗೋಡೆ ಕಾಮಗಾರಿ ₹ 6 ಕೋಟಿ ವೆಚ್ಚದಲ್ಲಿ ನಡೆಯುತ್ತಿದ್ದು, ಹೆಚ್ಚುವರಿಯಾಗಿ ₹ 1 ಕೋಟಿ ಹಣ ಬಿಡುಗಡೆ ಮಾಡಲಾಗುವುದು ಎಂದು ಭರವಸೆ ನೀಡಿದರು.
ಹಿರಿಮಾವುರದಮ್ಮ ದೇವಿ ದೇವಸ್ಥಾನದ ಬಳಿ ನಿರ್ಮಿಸಿರುವ ತಡೆಗೋಡೆಯನ್ನು ಮತ್ತಷ್ಟು ಎತ್ತರಿಸಿ ಸುತ್ತ ಗ್ರೀಲ್ ಹಾಕಿ ವ್ಯವಸ್ಥೆ ಮಾಡಲು ಬೇಕಾದ ಕಾಮಾಗಾರಿಗೆ ಅನುದಾನವನ್ನು ಕೂಡಲೇ ಬಿಡುಗಡೆ ಮಾಡಲಾಗುವುದು. ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವುದರಿಂದ ಜಿಲ್ಲೆಯಲ್ಲಿ ಅಭಿವೃದ್ಧಿಗೆ ಕಾಮಗಾರಿಗಳಿಗೆ ಕೊರತೆ ಇಲ್ಲ. ಗ್ರಾಮಾಂತರದಲ್ಲಿ ಅಭಿವೃದ್ಧಿಯ ಶಕೆ ಆರಂಭವಾಗಿದೆ ಎಂದರು.
‘ಈ ಹಿಂದೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹಿರಿಮಾವುರದಮ್ಮ ದೇವಸ್ಥಾನದ ಜೀರ್ಣೋದ್ಧಾರ ತಮಗೆ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದರು. ಅದರಂತೆ ಇಂದು ದೇವಾಲಯಕ್ಕೆ ₹ 6 ಕೋಟಿ ಅನುದಾನ ನೀಡಲಾಗಿದೆ. ನುಡಿದಂತೆ ನಡೆಯುವುದು ಬಿಜೆಪಿಯಿಂದ ಮಾತ್ರ ಸಾಧ್ಯ’ ಎಂದು ಹೇಳಿದರು.
ಶಾಸಕ ಕೆ.ಬಿ. ಅಶೋಕ ನಾಯ್ಕ ಅವರು ಗ್ರಾಮಾಂತರ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಹೆಚ್ಚು ಶ್ರಮ ವಹಿಸುತ್ತಿದ್ದು, ಆಯ್ಕೆಯಾದ ದಿನದಿಂದ ಇಂದಿನವರೆಗೂ ನೂರಾರು ಕೋಟಿ ರೂಪಾಯಿ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಶ್ರಮ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ತಡೆಗೋಡೆಯನ್ನು ಮೊರಾರ್ಜಿ ದೇಸಾಯಿ ಶಾಲೆಯವರೆಗೆ ಮುಂದುವರಿಸಬೇಕು ಎಂದು ಗ್ರಾಮ ಮುಖಂಡರು ಸಂಸದರನ್ನು ಒತ್ತಾಯಿಸಿದರು.
ಗ್ರಾಮಾಂತರ ಶಾಸಕ ಕೆ.ಬಿ.ಅಶೋಕನಾಯ್ಕ್, ಬಿಜೆಪಿ ಮಂಡಲ ಅಧ್ಯಕ್ಷ ಮಂಜುನಾಥ್, ಎಪಿಎಂಸಿ ಸದಸ್ಯ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ವೀರಭದ್ರಪ್ಪ ಪೂಜಾರ್, ಭದ್ರಾ ಕಾಡಾ ನಿರ್ದೇಶಕ ಷಡಾಕ್ಷರಪ್ಪಗೌಡ್ರು, ಮುಖಂಡರಾದ ಎ.ಜಿ. ಈಶಪ್ಪಗೌಡ್ರು, ಹಾಲಪ್ಪಗೌಡ್ರು, ರಾಜೇಶ್ ಪಾಟೀಲ್, ಸುಬ್ರಮಣ್ಣಿ, ಪಿ.ಆರ್. ಮಾವುರಪ್ಪ ಪೂಜಾರ್, ಸಿದ್ದಲಿಂಗಪ್ಪಗೌಡ, ಎಂ. ಕುಬೇಂದ್ರಪ್ಪ, ಅಕ್ಕಿಮಟ್ಟಿ ಜಗದೀಶ್, ಜೆ.ಜಿ ಅಬಿಷೇಕ್ಗೌಡ, ಫಾಲಾಕ್ಷಪ್ಪ, ಸುಧಾಮಣಿ, ನಿರ್ಮಲಮ್ಮಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.