ADVERTISEMENT

ಬಡವರಿಗೆ ಮನೆ ಹಂಚಿಕೆ: ಸಂತಸದ ವಿಚಾರ

ಗೋವಿಂದಾಪುರ: ಗುಂಪು ಮನೆ ಆಯ್ಕೆ ಪ್ರಕ್ರಿಯೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಚಾಲನೆ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 5:07 IST
Last Updated 7 ಫೆಬ್ರುವರಿ 2023, 5:07 IST
ಶಿವಮೊಗ್ಗದ ಗೋವಿಂದಾಪುರದಲ್ಲಿ ಸೋಮವಾರ ಗುಂಪು ಮನೆಗಳ ಆಯ್ಕೆ ಪ್ರಕ್ರಿಯೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು
ಶಿವಮೊಗ್ಗದ ಗೋವಿಂದಾಪುರದಲ್ಲಿ ಸೋಮವಾರ ಗುಂಪು ಮನೆಗಳ ಆಯ್ಕೆ ಪ್ರಕ್ರಿಯೆಗೆ ಶಾಸಕ ಕೆ.ಎಸ್.ಈಶ್ವರಪ್ಪ ಚಾಲನೆ ನೀಡಿದರು   

ಶಿವಮೊಗ್ಗ: ‘ಬಡವರಿಗೆ ಮನೆ ಹಂಚುವುದು ನನ್ನ ಪಾಲಿಗೆ ಅತ್ಯಂತ ಸಂತೋಷದ ದಿನ’ ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಹೇಳಿದರು.

ನಗರದ ಹೊರವಲಯದ ಗೋವಿಂದಾಪುರ ದಲ್ಲಿ ಆಶ್ರಯ ಯೋಜನೆಯಡಿ 620 ಫಲಾನುಭವಿಗಳಿಗೆ ಲಾಟರಿ ಮೂಲಕ ಗುಂಪು ಮನೆ ಆಯ್ಕೆ ಪ್ರಕ್ರಿಯೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಏಳು ವರ್ಷಗಳ ಹಿಂದೆಯೇ ಆಶ್ರಯ ಮನೆ ನೀಡಲು ಎಲ್ಲಾ ಹಂತದ ಯೋಜನೆ ಸಿದ್ದಪಡಿಸಲಾಗಿತ್ತು. ತಾಂತ್ರಿಕ ತೊಂದರೆಗಳಿಂದ ಸ್ವಲ್ಪ ಮಟ್ಟಿನ ವಿಳಂಬವಾಗಿದೆ. ಫೆ.8 ರಂದು ಮುಖ್ಯಮಂತ್ರಿ ಎನ್‌ಇಎಸ್ ಮೈದಾನದಲ್ಲಿ 620 ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಿದ್ದಾರೆ ಎಂದರು.

ADVERTISEMENT

ಈಗಾಗಲೇ ಬ್ಯಾಂಕ್ ಸಾಲ ಮಂಜೂರಾದವರಿಗೆ ಮನೆ ವಿತರಿಸಲು ಆದ್ಯತೆ ನೀಡಿದೆ. ವಂತಿಗೆ ಪಾವತಿಸಿದ ಫಲಾನುಭವಿಗಳಿಗೆ ಹಂಚಿಕೆ ಪ್ರಕ್ರಿಯೆ ನಡೆದಿದೆ ಎಂದರು.

ಉಳಿದ 2400 ಮನೆಗಳ ನಿರ್ಮಾಣ ಪ್ರಕ್ರಿಯೆ ಜಾರಿಯಲ್ಲಿದ್ದು, ಒಂದು ವರ್ಷದ ಅವಧಿಯೊಳಗೆ ಪೂರ್ಣ ಗೊಳಿಸಲಾಗುವುದು. ಪೂರ್ಣಗೊಂಡ ಮನೆಗಳನ್ನು 3 ತಿಂಗಳಿಗೊಮ್ಮೆ ಹಂಚಿಕೆ ಮಾಡಲಾಗುವುದು. ಇದಕ್ಕಾಗಿ ಮೂಲ ಸೌಕರ್ಯಗಳಾದ ರಸ್ತೆ, ನೀರು, ವಿದ್ಯುತ್, ಒಳಚರಂಡಿ ಸೇರಿದಂತೆ ಎಲ್ಲಾ ಸೌಕರ್ಯ ನೀಡಲಾಗುವುದು ಎಂದರು.

ಬ್ಯಾಂಕ್ ಸಾಲ ಲಭ್ಯಗೊಂಡು ಅವರೊಂದಿಗೆ ಅಗ್ರಿಮೆಂಟ್ ಆದ ತಿಂಗಳಿಂದಲೇ ಮಾಸಿಕ ಕಂತು ಕಟ್ಟಲು ಪ್ರಾರಂಭವಾಗುತ್ತದೆ. ಉಳಿದ ಮನೆಗಳ ನಿರ್ಮಾಣ ಕಾರ್ಯ ಕೂಡ ವೇಗವಾಗಿ ನಡೆಯಲಿದೆ ಎಂದರು.

ಆಯುಕ್ತ ಮಾಯಣ್ಣ ಗೌಡ ಮಾತನಾಡಿ, ಜಿ ಪ್ಲಸ್ ಟು ಮಾದರಿಯ ಮನೆಗಳಲ್ಲಿ ನೆಲಮಹಡಿಯಲ್ಲಿ 8 ಮನೆಗಳಿದ್ದು, ಸೈನಿಕರ ಕೋಟಾದಲ್ಲಿ 1, ಹಿರಿಯ ನಾಗರಿಕರಿಗೆ 3, ಅಂಗವಿಕಲರಿಗೆ 4 ಈ ರೀತಿ ಹಂಚಿಕೆಯಾಗಿದೆ. 1ನೇ ಮತ್ತು 2ನೇ ಮಹಡಿಯಲ್ಲಿ ಎಲ್ಲಾ ವರ್ಗದವರಿಗೂ ಹಂಚಿಕೆಯಾಗುತ್ತದೆ. ಲಾಟರಿ ಪ್ರಕ್ರಿಯೆ ವಿಡಿಯೊ
ಚಿತ್ರೀಕರಣ ಮಾಡಲಾಗುತ್ತದೆ ಎಂದು ಹೇಳಿದರು.

ನೆಹರೂ ರಸ್ತೆಯ ಆಶ್ರಯ ಕಚೇರಿಯಲ್ಲಿ ಈ ಬಗ್ಗೆ ಸಂಪೂರ್ಣ ಮಾಹಿತಿ ನೀಡಲು ‘ಸೌಜನ್ಯ‘ ಹೆಸರಿನ ಕೌಂಟರ್‌ ಕೂಡ ತೆರೆದಿದ್ದು, ಅಲ್ಲಿ ಎಲ್ಲಾ ಮಾಹಿತಿ ನೀಡಲಾಗುತ್ತದೆ. ಮೂಲ ಸೌಲಭ್ಯಗಳನ್ನು ತಾತ್ಕಾಲಿಕವಾಗಿ ಒದಗಿಸಲಾಗಿದೆ. ಸಂಪರ್ಕ ರಸ್ತೆಗಳಿಗೂ ಸರ್ಕಾರದ ಅನುದಾನ ಬಂದಿದ್ದು, ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದೆ. ಒಂದು ಬ್ಲಾಕ್‌ನಲ್ಲಿ 24 ಮನೆಗಳಿರುತ್ತವೆ ಎಂದರು.

ಶಾಸಕ ಆಯನೂರು ಮಂಜುನಾಥ್, ಮೇಯರ್ ಶಿವಕುಮಾರ್, ಸೂಡಾ ಅಧ್ಯಕ್ಷ ನಾಗರಾಜ್, ಉಪಮೇಯರ್ ಲಕ್ದ್ಮೀ ಶಂಕರ್‌ನಾಯ್ಕ್, ಆಶ್ರಯ ಸಮಿತಿ ಅಧ್ಯಕ್ಷ ಶಶಿಧರ್, ಪಾಲಿಕೆ ಸದಸ್ಯರಾದ ಎಸ್.ಎನ್.ಚನ್ನಬಸಪ್ಪ, ಧೀರರಾಜ್ ಹೊನ್ನವಿಲೆ, ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್, ಈ.ವಿಶ್ವಾಸ್, ಯೋಜನಾಧಿಕಾರಿ ಕರಿಭೀಮಣ್ಣನವರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.