ತುಮರಿ: ದ್ವೀಪದ ತುರ್ತು ಸೇವೆಗಾಗಿ ನೀಡಲಾದ ಆಂಬುಲೆನ್ಸ್ ಅನ್ನು ಬ್ಯಾಕೋಡು ಆರೋಗ್ಯ ಕೇಂದ್ರಕ್ಕೆ ನೀಡದೇ ತುಮರಿ ಆರೋಗ್ಯ ಕೇಂದ್ರಕ್ಕೆ ನೀಡಿರುವುದು ಬ್ಯಾಕೋಡು ಭಾಗದ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಆರೋಗ್ಯ ಇಲಾಖೆಯಿಂದ ತುಮರಿ ಪ್ರಾಥಮಿಕ ಆರೋಗ್ಯ ಘಟಕಕ್ಕೆ ಶನಿವಾರ ಮತ್ತೊಂದು ಆಂಬುಲೆನ್ಸ್ ಮಂಜೂರು ಮಾಡಲಾಗಿದೆ.
ತುಮರಿ ಅಂಬುಲೆನ್ಸ್ ವ್ಯವಸ್ಥೆಗಾಗಿ ಈ ಹಿಂದೆ ಜನರು ಪ್ರತಿಭಟನೆ ನಡೆಸಿದ ವೇಳೆ ಒಂದು ಅಂಬುಲೆನ್ಸ್ ಬ್ಯಾಕೋಡು ಆರೋಗ್ಯ ಕೇಂದ್ರಕ್ಕೆ ನೀಡುವುದಾಗಿ ತಾಲ್ಲೂಕು ಆರೋಗ್ಯಾಧಿಕಾರಿ ಭರವಸೆ ನೀಡಿದ್ದರು. ಆದರೆ ಈಗ ಮಾತು ಬದಲಿಸುತ್ತಿದ್ದಾರೆ ಎಂಬುದು ಗ್ರಾಮಸ್ಥರ ಆರೋಪ.
ಬ್ಯಾಕೋಡು, ಹೊಸಕೊಪ್ಪ, ಕಾರಣಿ ಭಾಗದ 20 ಸಾವಿರಕ್ಕೂ ಅಧಿಕ ಜನರಿಗೆ ಯಾವುದೇ ಆಂಬುಲೆನ್ಸ್ ಸೇವೆ ಇಲ್ಲ.ತುರ್ತು ಸಂದರ್ಭದಲ್ಲಿ ಅವರು ತುಮರಿ ಭಾಗದಿಂದಲೇ ಆಂಬುಲೆನ್ಸ್ ಸೇವೆ ಪಡೆಯಬೇಕು. ಅದು ಬರುವುದಕ್ಕೆ ಕಾಯಬೇಕು.ಮೂಲಸೌಕರ್ಯ ವಂಚಿತ ಹಳ್ಳಿಗಳಾದ ಕುದರೂರು, ಕಟ್ಟಿನಕಾರು, ಸುಳ್ಳಳ್ಳಿ, ಹೊಸಕೊಪ್ಪದ ಜನರ ತುರ್ತು ಪರಿಸ್ಥಿತಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ತುಮರಿಯಿಂದ ಅಂಬುಲೆನ್ಸ್ ಬರುವ ಹೊತ್ತಿಗೆ ಅವಘಡಗಳು ಸಂಭವಿಸುವ ಸಾಧ್ಯತೆ ಹೆಚ್ಚು ಎಂದು ಹೇಳುತ್ತಾರೆ ಗ್ರಾಮಸ್ಥರಾದಆನಂದ್ ಬಾಳ, ಕೃಷ್ಣಮೂರ್ತಿ.
ಈ ಹಿಂದೆ ಬ್ಯಾಕೋಡಿಗೆ ಅಂಬುಲೆನ್ಸ್ ನೀಡಲು ಜನರು ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು.
ಈಗ ತಲುಪಿರುವ ನೂತನ ಆಂಬುಲೆನ್ಸ್ ತುಮರಿಗೆ ನಿಯೋಜನೆಗೊಂಡಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮೋಹನ್ ಕೆ.ಎಸ್. ಹೇಳಿದರು.
‘ಈ ಹಿಂದಿನ ಹೋರಾಟ ಸಂದರ್ಭದಲ್ಲಿ ನೀಡಿದ ಆಶ್ವಾಸನೆಯಂತೆ ನಮ್ಮ ನೆಲದ ಹೋರಾಟದ ಮುಖ್ಯ ಬೇಡಿಕೆಯಾದ ದ್ವೀಪಕ್ಕೆ ಎರಡು ಆಂಬುಲೆನ್ಸ್ ಸೇವೆ ನೀಡಿರುವುದು ಸಂತಸ ತಂದಿದೆ. ತುಮರಿ ಮತ್ತು ಬ್ಯಾಕೊಡು ಆಸ್ಪತ್ರೆಗೆ ಸ್ಟಾಫ್ನರ್ಸ್ನೇಮಕ ಮಾಡಿದರೆ ಅನುಕೂಲವಾಗಲಿದೆ’ ಎನ್ನುತ್ತಾರೆಕುದರೂರು ಗ್ರಾಮ ಪಂಚಾಯಿತಿಯಮುಖಂಡರವಿ ಅಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.