ಸಾಗರ: ನಿರಂತರ ಯೋಗಾಭ್ಯಾಸದಿಂದ ಮಾನಸಿಕ ಹಾಗೂ ದೈಹಿಕ ದೃಢತೆ ಕಾಪಾಡಿಕೊಳ್ಳಲು ಸಾಧ್ಯ ಎಂದು ಹಿರಿಯ ವಿಭಾಗದ ಪ್ರಧಾನ ನ್ಯಾಯಾಧೀಶ ಎಸ್.ನಟರಾಜ್ ತಿಳಿಸಿದರು.
ಇಲ್ಲಿನ ಪ್ರಾಂತ್ಯ ಆರ್ಯ ಈಡಿಗರ ಸಭಾಭವನದ ಶ್ರೀಧರ–ಪ್ರಣೀತ ಯೋಗ ವೇದಿಕೆಯಲ್ಲಿ ಶುಕ್ರವಾರ ರಾಜ್ಯ ಅಮೆಚೂರ್ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಜಿಲ್ಲಾ ಅಮೆಚೂರ್ ಯೋಗಾಸನಾ ಕ್ರೀಡಾ ಅಸೋಸಿಯೇಷನ್ ಮತ್ತು ಕಾನೂನು ನೆರವು ಸಮಿತಿ, ಗುರುಕುಲಂ ಯೋಗ ವಿದ್ಯಾಕೇಂದ್ರದಿಂದ ಏರ್ಪಡಿಸಿದ್ದ ರಾಜ್ಯಮಟ್ಟದ ಯೋಗಾಸನಾ ಸ್ಪರ್ಧೆ ಮತ್ತು ರಾಷ್ಟ್ರಮಟ್ಟದ ತಂಡದ ಆಯ್ಕೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಯೋಗ ಕುರಿತು ಇನ್ನಷ್ಟು ಆಸಕ್ತಿ ಹೆಚ್ಚಬೇಕು. ಭಾರತೀಯ ಯೋಗಕ್ಕೆ ಪ್ರಾಚೀನ ಇತಿಹಾಸವಿದೆ. ಭಾರತದಲ್ಲಿ ಋಷಿಮುನಿಗಳ ಕಾಲದಿಂದಲೂ ಯೋಗವನ್ನು ಕಲಿಯುತ್ತ, ಕಲಿಸುತ್ತ, ಅನುಸರಿಸುತ್ತ ಬರಲಾಗಿದೆ. ಇದೀಗ ವಿಶ್ವದೆಲ್ಲೆಡೆ ಯೋಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ಸಿಗುತ್ತಿದೆ. ಜೂನ್ 21ರಂದು ಭಾರತ ಕರೆ ಕೊಟ್ಟ ಯೋಗ ದಿನಕ್ಕೆ ವಿಶ್ವದೆಲ್ಲೆಡೆ ಮಾನ್ಯತೆ ದೊರೆತಿದೆ ಎಂದರು.
1978ರಲ್ಲಿ ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್ ಪ್ರಾರಂಭಗೊಂಡಿದ್ದು, ಅಂದಿನಿಂದ ಇಂದಿನವರೆಗೆ ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಯೋಗಾಸನಾ ಸ್ಪರ್ಧೆಗಳಿಗೆ ರಾಜ್ಯದ ತಂಡವನ್ನು ಕಳಿಸಲಾಗುತ್ತಿದೆ. ಕರ್ನಾಟಕದ ಯೋಗಪಟುಗಳು ಅನೇಕ ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಜಯಗಳಿಸಿದ್ದಾರೆ ಎಂದು ರಾಜ್ಯ ಅಮೆಚೂರ್ ಯೋಗ ಸಂಸ್ಥೆ ಅಧ್ಯಕ್ಷ ಜಿ.ಎನ್.ಕೃಷ್ಣಮೂರ್ತಿ ತಿಳಿಸಿದರು.
ಗಣಪತಿ ಶಿರಳಗಿ, ಜಲೀಲ್ ಸಾಗರ್, ವಿ. ವಿಕಾಸ್, ಎಲ್.ಎಚ್. ಆರ್ವಿ ಅವರನ್ನು ಸನ್ಮಾನಿಸಲಾಯಿತು.
ನ್ಯಾಯಾಧೀಶರಾದ ಎಂ.ವಿ. ಮಾದೇಶ್, ಪ್ರಮುಖರಾದ ಪರಮೇಶ್ವರ್, ಕರುಣಾಕರ್, ಕೆ.ಎಸ್.ಗೌತಮ್, ಅಮರನಾಥ್, ಗಣೇಶ್ ಕುಮರ್, ಲಕ್ಷ್ಮೀ ನಾರಾಯಣ, ಶ್ರೀಧರಮೂರ್ತಿ ಕಾನುಗೋಡು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.