ADVERTISEMENT

ಬಿಜೆಪಿಯಿಂದ ಜನ ವಿರೋಧಿ ನೀತಿ: ಟೀಕೆ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2020, 8:43 IST
Last Updated 1 ಅಕ್ಟೋಬರ್ 2020, 8:43 IST
ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರರಾಗಿ ನೇಮಕಗೊಂಡಿರುವ ಗೋಪಾಲಕೃಷ್ಣ ಬೇಳೂರು ಹಾಗೂ ಪ್ಯಾನಲಿಸ್ಟ್ ಅನಿತಾಕುಮಾರಿ, ಜ್ಯೋತಿ ಕೋವಿ ಅವರನ್ನು ಅಭಿನಂದಿಸಲಾಯಿತು.
ಸಾಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಕೆಪಿಸಿಸಿ ವಕ್ತಾರರಾಗಿ ನೇಮಕಗೊಂಡಿರುವ ಗೋಪಾಲಕೃಷ್ಣ ಬೇಳೂರು ಹಾಗೂ ಪ್ಯಾನಲಿಸ್ಟ್ ಅನಿತಾಕುಮಾರಿ, ಜ್ಯೋತಿ ಕೋವಿ ಅವರನ್ನು ಅಭಿನಂದಿಸಲಾಯಿತು.   

ಸಾಗರ: ‘ಹಲವು ಜನಪರ ಕಾಯ್ದೆಗಳಿಗೆ ತಿದ್ದುಪಡಿ ತರುವ ಮೂಲಕ ಜನ ವಿರೋಧಿ ನೀತಿ ಅನುಸರಿಸುತ್ತಿರುವ ರಾಜ್ಯದ ಬಿಜೆಪಿ ಮುಖಂಡರ ನೀರಿಳಿಸುವ ಕೆಲಸವನ್ನು ಕಾಂಗ್ರೆಸ್ ವಕ್ತಾರನಾಗಿ ಸಮರ್ಥವಾಗಿ ನಿಭಾಯಿಸುತ್ತೇನೆ’ ಎಂದು ಕೆಪಿಸಿಸಿ ವಕ್ತಾರ ಗೋಪಾಲಕೃಷ್ಣ ಬೇಳೂರು ಹೇಳಿದರು.

ಇಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ವಕ್ತಾರರಾಗಿ ನೇಮಕಗೊಂಡ ಕಾರಣ ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.

‘ಹೇಳಿಕೆಗಳನ್ನು ತಿರುಚುವುದರಲ್ಲಿ, ಅಪಪ್ರಚಾರ ಮಾಡುವುದರಲ್ಲಿ ಬಿಜೆಪಿ ಮುಖಂಡರು ನಿಸ್ಸೀಮರಾಗಿದ್ದಾರೆ. ಅವರ ಬಂಡವಾಳವನ್ನು ಬಯಲು ಮಾಡುತ್ತೇನೆ.ಭೂ ಸುಧಾರಣೆ ಕಾನೂನಿಗೆ ತಿದ್ದುಪಡಿ ತರುವ ಮೂಲಕ ಬೆಂಗಳೂರು ಸುತ್ತಮುತ್ತಲಿನ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಖರೀದಿಸಲು ಯಡಿಯೂರಪ್ಪ ಅವರ ಕುಟುಂಬ ಮುಂದಾಗಿದೆ. ರಾಜ್ಯದ ಬಿಜೆಪಿ ಸರ್ಕಾರ ಕಾರ್ಪೊರೇಟ್ ಸಂಸ್ಥೆಗಳ ಗುಲಾಮನಂತೆ ವರ್ತಿಸುತ್ತಿದೆ’ ಎಂದು ಟೀಕಿಸಿದರು.

ADVERTISEMENT

‘ಸಾಗರ ಕ್ಷೇತ್ರದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಯಾವುದೇ ಕಚೇರಿಯಲ್ಲೂ ಜನರ ಕೆಲಸವಾಗುತ್ತಿಲ್ಲ. ಶಾಸಕ ಹರತಾಳು ಹಾಲಪ್ಪ ಅವರು ಎಲ್ಲೆಂದರಲ್ಲಿ ಬೇನಾಮಿ ಹೆಸರಿನಲ್ಲಿ ಆಸ್ತಿ ಖರೀದಿಸಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಕೊರೊನಾ ಸಂದರ್ಭದಲ್ಲಿ ₹ 80 ಲಕ್ಷ ವೆಚ್ಚದಲ್ಲಿ ಗಣಪತಿ ಕೆರೆಯ ಪಕ್ಕದಲ್ಲಿ ಧ್ವಜಸ್ತಂಭ ನಿರ್ಮಿಸುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು, ‘ಇದೇ ಹಣವನ್ನು ಕೊರೊನಾದಿಂದ ಸಂಕಷ್ಟದಲ್ಲಿರುವವರಿಗೆ ಹಂಚಬಹು
ದಿತ್ತು. ಗಣಪತಿ ಕೆರೆ ಅಭಿವೃದ್ಧಿ ಹೆಸರಿನಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ’ ಎಂದು ದೂರಿದರು.

ಕಾಂಗ್ರೆಸ್ ಮುಖಂಡ ಬಿ.ಆರ್.ಜಯಂತ್, ‘ಸುಳ್ಳುಗಾರರು, ಜನ ವಿರೋಧಿಗಳು ಆಡಳಿತ ನಡೆಸುತ್ತಿರುವ ಕಾಲವಿದು. ಈ ಹೊತ್ತಿನಲ್ಲಿ ಕಾಂಗ್ರೆಸ್ ವಕ್ತಾರರ ಮಾತುಗಳು ಜನರ ಧ್ವನಿಯಾಗಬೇಕು. ಅಂತಹ ಸಾಮರ್ಥ್ಯ ಗೋಪಾಲಕೃಷ್ಣ ಅವರಿಗೆ ಇದೆ’ ಎಂದರು.

ಕೆಪಿಸಿಸಿ ಪ್ಯಾನಲಿಸ್ಟ್ ಆಗಿ ನೇಮಕಗೊಂಡಿರುವ ಜಿಲ್ಲಾ ಪಂಚಾಯಿತಿ ಸದಸ್ಯೆ ಅನಿತಾಕುಮಾರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ಜ್ಯೋತಿ ಕೋವಿ ಅವರನ್ನು ಅಭಿನಂದಿಸಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯ ಭೀಮನೇರಿ ಶಿವಪ್ಪ, ಪ್ರಮುಖರಾದ ಸುಮಂಗಲಾ ರಾಮಕೃಷ್ಣ, ಮಧು ಮಾಲತಿ, ಸುಧಾಕರ ಕುಗ್ವೆ, ಯಶವಂತ ಫಣಿ, ಎಪಿಎಂಸಿ ಸದಸ್ಯ ಕೆ. ಹೊಳಿಯಪ್ಪ, ಹುಚ್ಚಪ್ಪ ಮಂಡಗಳಲೆ, ರವಿಕುಮಾರ್ ಎಚ್.ಎಂ., ಮಹಾಬಲ ಕೌತಿ, ನಾಗರಾಜ್ ಗುಡ್ಡೆಮನೆ, ಎಲ್. ಚಂದ್ರಪ್ಪ, ನಾಗರಾಜ ಸ್ವಾಮಿ ಇದ್ದರು.

ಅನ್ವರ್ ಬಾಷಾ ಸ್ವಾಗತಿಸಿದರು. ಐ.ಎನ್. ಸುರೇಶ್ ಬಾಬು ಪ್ರಾಸ್ತಾವಿಕವಾಗಿ ಮಾತನಾಡಿದರು. ವೆಂಕಟೇಶ್ ಮೆಳವರಿಗೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.