ಶಿವಮೊಗ್ಗ: ಸೊರಬ ತಾಲ್ಲೂಕಿನ ಆನವಟ್ಟಿಯಲ್ಲಿ ‘ಜೊತೆಗಿರುವನು ಚಂದಿರ’ ನಾಟಕದ ಪ್ರದರ್ಶನ ಮತ್ತೊಮ್ಮೆ ಆಯೋಜಿಸಲು ಜಿಲ್ಲೆಯ ಕಲಾವಿದರ ಒಕ್ಕೂಟದಿಂದಸೋಮವಾರ ಇಲ್ಲಿ ನಡೆದ ಖಂಡನಾ ಸಭೆಯಲ್ಲಿ ನಿರ್ಣಯಿಸಲಾಯಿತು. ಜಿಲ್ಲೆಯ ರಂಗಾಸಕ್ತರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಆನವಟ್ಟಿಯಲ್ಲಿ ಭಾನುವಾರ ಸಂಜೆ ನಾಟಕ ಪ್ರದರ್ಶನಕ್ಕೆ ಅಡ್ಡಿಪಡಿಸಿದವರ ವಿರುದ್ಧ ಪೊಲೀಸರಿಗೆ ದೂರು ನೀಡಿಲ್ಲ. ಬದಲಿಗೆ ಜುಲೈ 6ರಂದು ಕಲಾವಿದರು ಹಾಗೂ ಕಲಾಸಕ್ತರು ಸೇರಿ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಸಲ್ಲಿಸಿ, ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ವಹಿಸಲು ಮನವಿ ಮಾಡಲಿದ್ದೇವೆ ಎಂದು ‘ಜತೆಗಿರುವನು ಚಂದಿರ‘ ನಾಟಕದ ಆಯೋಜಕ ಕೊಟ್ರಪ್ಪ ಹಿರೇಮಾಗಡಿ ತಿಳಿಸಿದರು.
ಆನವಟ್ಟಿಯಲ್ಲಿ ನಾಟಕ ಪ್ರದರ್ಶನ ಇನ್ನೊಮ್ಮೆ ಆಯೋಜಿಸುವ ಮೊದಲು ಉಡುತಡಿ ಇಲ್ಲವೇ ಬಳ್ಳಿಗಾವಿಯಿಂದ ಪಾದಯಾತ್ರೆ ಮಾಡಲಿದ್ದೇವೆ. ನಾಟಕ ವೀಕ್ಷಣೆಗೆ ಜಿಲ್ಲೆಯ ಎಲ್ಲ ಶಾಸಕರು, ಸಂಸದರನ್ನು ಆಹ್ವಾನಿಸಲಿದ್ದೇವೆ.ಅವರು ಕುಳಿತುಕೊಂಡು ನೋಡಲಿ. ಏನಾದರೂ ಇದ್ದರೆ ಚರ್ಚಿಸಲಿ. ಎಲ್ಲ ರಂಗ ತಂಡದವರು, ಕಲಾವಿದರು ಎಲ್ಲರೂ ಸೇರಿ ಆ ನಾಟಕ ಕುಳಿತು ನೋಡಬೇಕು ಎಂಬ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಕೊಟ್ರಪ್ಪ ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.