ಶಿವಮೊಗ್ಗ: ಮಾರಣಾಂತಿಕ ಹಲ್ಲೆ ನಡೆಸಿದ ಮೂವರಿಗೆ ಶಿವಮೊಗ್ಗದ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಮೂರು ವರ್ಷ ಕಠಿಣ ಕಾರಾಗೃಹ ವಾಸ ಮತ್ತು ₹5000 ದಂಡ ವಿಧಿಸಿ ತೀರ್ಪು ನೀಡಿದೆ.
2018 ರಲ್ಲಿ ಶಿವಮೊಗ್ಗದ ಗೋಪಾಳ ಬಡಾವಣೆಯ ವಾಸಿಯಾದ ರಿಚರ್ಡ್ ಸಂತೋಷ್(32) ಗೋಪಾಳದ ವನಸಿರಿ ಪಾರ್ಕ್ ನ ಹತ್ತಿರ ಹೋಗುತ್ತಿರುವಾಗ ಡಿಯೋ ಬೈಕ್ ನಲ್ಲಿ ಬಂದ ಮೂವರು ಭರ್ಜಿಯಿಂದ ಕುತ್ತಿಗೆಗೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದರು. ತುಂಗನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು
ತನಿಖಾಧಿಕಾರಿ ಅಣ್ಣಯ್ಯ, ಕೆ. ಟಿ, ಪ್ರಕರಣದ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಸರ್ಕಾರಿ ವಕೀಲರಾದ ರತ್ನಮ್ಮ ಪ್ರಕರಣದ ವಾದ ಮಂಡಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಮಾನು ಕೆ. ಎಸ್ ಬುಧವಾರ ತೀರ್ಪು ನೀಡಿದ್ದು, ಆರೋಪಿಗಳಾದ ಗೋವಿಂದಾಪುರ ನಿವಾಸಿ ನಿತಿನ್ (22), ಶರಾವತಿ ನಗರದ ನಿವಾಸಿ ದೀಕ್ಷಿತ್ (21) ಹಾಗೂ ನವುಲೆ ವಿನಾಯಕ ನಗರದ ಕಿರಣ್ (23) ಶಿಕ್ಷೆ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲರಾದರೆ ಹೆಚ್ಚುವರಿಯಾಗಿ ಎರಡು ತಿಂಗಳು ಕಾಲ ಸಾದಾ ಜೈಲು ಶಿಕ್ಷೆ ನೀಡಿ ಆದೇಶ ನೀಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.