ಶಿವಮೊಗ್ಗ: ನಗರದ ಬಿ.ಎಚ್.ರಸ್ತೆಯ ಬಳಿ ಗುರುವಾರ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಬಜರಂಗ ದಳದ ಮುಖಂಡ ನಾಗೇಶ್ ಮೇಲೆ ನಾಲ್ವರು ಹಲ್ಲೆ ನಡೆಸಿದ್ದಾರೆ. ಘಟನೆಯ ಬೆನ್ನಲ್ಲೇ ಹಲವೆಡೆ ಘರ್ಷಣೆಗಳು ನಡೆದಿದ್ದು, ಪೊಲೀಸರು ಗಾಂಧಿ ಬಜಾರ್ನ ಎಲ್ಲ ಅಂಗಡಿ–ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದಾರೆ.
ಅಶೋಕ ರಸ್ತೆಯ ನಾಗೇಶ್ ವಾಯುವಿಹಾರಕ್ಕೆ ನಿತ್ಯವೂ ನೆಹರೂ ಕ್ರೀಡಾಂಗಣಕ್ಕೆ ಬರುತ್ತಿದ್ದರು. ಸಮಯದ ಖಚಿತ ಮಾಹಿತಿ ಇದ್ದ ದುಷ್ಕರ್ಮಿಗಳು ಮಾರ್ಗ ಮಧ್ಯೆ ಹಲ್ಲೆ ನಡೆಸಿದ್ದಾರೆ. ಮೂಗು, ಬಾಯಿ, ತಲೆಗೆ ಬಲವಾದ ಪೆಟ್ಟುಗಳು ಬಿದ್ದಿವೆ. ತಕ್ಷಣ ಅಲ್ಲಿದ್ದವರು ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನೆಯ ನಂತರ ಗಾಂಧಿ ಬಜಾರ್, ಆಜಾದ್ ನಗರ, ರವಿ ವರ್ಮ ಬೀದಿಯಲ್ಲಿ ಎರಡು ಗುಂಪುಗಳ ಮಧ್ಯೆ ಘರ್ಷಣೆ ನಡೆದಿವೆ. ರಾಮಣ್ಣ ಶ್ರೇಷ್ಟಿ ಪಾರ್ಕ್ ಬಳಿ ಒಂದು ಕಾರು, ಕಸ್ತೂರ ಬಾ ರಸ್ತೆಯಲ್ಲಿ ಒಂದು ಆಟೊರಿಕ್ಷಾ ಜಖಂಗೊಳಿಸಲಾಗಿದೆ. ಜೋರ್ ಬಜಾರ್ನಲ್ಲಿ ಮೂವರು ವ್ಯಾಪಾರಿಗಳ ಮೇಲೆ ಹಲ್ಲೆ ನಡೆದಿದೆ. ಇಡೀ ಗಾಂಧಿ ಬಜಾರ್ ಸ್ತಬ್ಧವಾಗಿದೆ. ಗ್ರಾಹಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದೆ.
ಪೂರ್ವವಲಯ ಐಜಿಪಿ ಎಸ್.ರವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಎಂ.ಶಾಂತರಾಜು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ವದಂತಿಗಳಿಗೆ ಕಿವಿಗೊಡದೇ ಶಾಂತಿ ಕಾಪಾಡುವಂತೆ ಕೋರಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.