ಶಿವಮೊಗ್ಗ: ಏಕ ವಚನದಲ್ಲಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅವರನ್ನು ಪಾಲಿಕೆ ಆಯುಕ್ತೆ ಚಾರುಲತಾ ಸೋಮಲ್ ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸಿ.ತಮ್ಮಣ್ಣ ಮಂಗಳವಾರ ನಗರದ ವಿವಿಧ ಕಾಮಗಾರಿಗಳನ್ನು ವೀಕ್ಷಿಸುವಾಗ ಆಯನೂರು ಮಂಜುನಾಥ್ ಆಯುಕ್ತರ ಕಾರ್ಯವೈಖರಿ ಕುರಿತು ದೂರಿದರು. ಆಯುಕ್ತರು ಸರಿಯಾಗಿ ಕೆಲಸ ಮಾಡುತ್ತಿಲ್ಲ. ‘ಸ್ಮಾರ್ಟ್ಸಿಟಿ’ ಕಾಮಗಾರಿಗಳು ನಿರೀಕ್ಷೆಯಂತೆ ವೇಗ ಪಡೆದಿಲ್ಲ. ಈ ಹಿಂದೆ ಪಾರ್ಕ್ಗೆ ಮೀಸಲಾಗಿದ್ದ ಸೆಲರ್ಗಳ ತೆರವು ಕಾರ್ಯಾಚರಣೆ ಅರ್ಧಕ್ಕೆ ನಿಂತಿದೆ. ಬೊಮ್ಮನಕಟ್ಟೆ ಹಾಗೂ ಇತರೆ ಹಲವು ಬಡಾವಣೆಗಳಲ್ಲಿ ಮೂಲ ಸೌಕರ್ಯ ಕಲ್ಪಿಸಿಲ್ಲ. ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಆಯನೂರು ಆರೋಪಿಸಿದರು.
ಈ ಸಮಯದಲ್ಲಿ ಅವರು ಬಳಸಿದ ಏಕ ವಚನ ಆಯುಕ್ತರನ್ನು ಕೆರಳಿಸಿತು. ಇದು ಇಬ್ಬರ ನಡುವೆ ಮಾತನಿ ಚಕಮಕಿಗೆ ಕಾರಣವಾಯಿತು. ಇಬ್ಬರೂ ಏರಿದ ಧ್ವನಿಯಲ್ಲಿ ಮಾತನಾಡಿದರು. ಉಸ್ತುವಾರಿ ಸಚಿವರು ಇಬ್ಬರನ್ನೂ ಸಮಾಧಾನ ಪಡಿಸಿದರು. ನಂತರ ‘ಸ್ಮಾರ್ಟ್ಸಿಟಿ’ ಯೋಜನೆ ಕಾಮಗಾರಿಗಳನ್ನು ವೀಕ್ಷಿಸಿದರು.
ಶಾಸಕ ಕೆ.ಎಸ್. ಈಶ್ವರಪ್ಪ, ವಿಧಾನ ಪರಿಷತ್ ಸದಸ್ಯ ಆರ್.ಪ್ರಸನ್ನ ಕುಮಾರ್, ಜಿಲ್ಲಾಧಿಕಾರಿ ದಯಾನಂದ್ ಇದ್ದರು.
ಸಚಿವರು ಗರಂ: ಜಿಲ್ಲೆಯಲ್ಲಿ ಕುಡಿಯುವ ನೀರು ಸೇರಿದಂತೆ ಸಾಕಷ್ಟು ಸಮಸ್ಯೆ ಇದ್ದರೂ ಮೂರು ತಿಂಗಳ ನಂತರ ಜಿಲ್ಲೆಗೆ ಬಂದಿದ್ದೀರಲ್ಲ ಎಂಬ ಪತ್ರಕರ್ತರ ಪ್ರಶ್ನೆಗೆ ಸಚಿವರು ಗರಂ ಆದರು.
ಚುನಾವಣಾ ನೀತಿ ಸಂಹಿತೆ ಕಾರಣ ಜಿಲ್ಲೆಗೆ ಬರಲು ಆಗಲಿಲ್ಲ. ಆದರೆ, ಸಮಸ್ಯೆಗಳ ನಿವಾರಣೆ ಕುರಿತು ಅಧಿಕಾರಿಗಳ ಜತೆ ನಿರಂತರ ಸಂಪರ್ಕದಲ್ಲಿದ್ದೆ. ಸೂಚನೆಗಳನ್ನು ನೀಡುತ್ತಿದ್ದೆ ಎಂದು ಸಮರ್ಥಿಸಿಕೊಂಡರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.