ಶಿವಮೊಗ್ಗ: ಜ್ಞಾನ ಸಮಾಜಕ್ಕೆ ಸದುಪಯೋಗವಾದರೆ ಕಲಿತ ಶಿಕ್ಷಣ ಸಾರ್ಥಕವಾಗುತ್ತದೆ ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎಸ್.ಪಾಟೀಲ್ ಪ್ರತಿಪಾದಿಸಿದರು.
ಬೆಕ್ಕಿನ ಕಲ್ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಶರಣರ ಮೌಲಿಕ ಚಿಂತನೆ–ಉಪನ್ಯಾಸ ಮಾಲಿಕೆ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶರಣರ ಕಾಯಕ ಚಿಂತನೆ ಮೈಗೂಡಿಸಿಕೊಳ್ಳಬೇಕು. ಜೀವನದಲ್ಲಿ ಅನುಸರಿಸಬೇಕು. ಇಂದಿನ ಯುವಜನರು ಶರಣರ ಚಿಂತನೆಗಳನ್ನು ಓದಿ ತಿಳಿದುಕೊಳ್ಳಬೇಕು ಎಂದರು.
ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಮೊಬೈಲ್ ಯುವ ಜನರನ್ನು ಹಾಳುಮಾಡುತ್ತಿದೆ ಎಂದು ದೂರುತ್ತೇವೆ. ಆದರೆ, ಇಂತಹ ತಂತ್ರಜ್ಞಾನದ ಫಲವಾಗಿಯೇ ಇಂದು ಸಾಕಷ್ಟು ವೇಗದ ಪ್ರಗತಿ ಸಾಧಿಸಲಾಗಿದೆ. ಯಾವುದೇ ತಂತ್ರಜ್ಞಾನ ಸದ್ಬಳಕೆ ಮಾಡಿಕೊಂಡರೆ ಪ್ರಗತಿ ಸಾಧ್ಯ. ದುರ್ಬಳಕೆ ಮಾಡಿಕೊಂಡರೆ ವಿನಾಶ ಕಟ್ಟಿಟ್ಟ ಬುತ್ತಿ ಎಂದು ಎಚ್ಚರಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಅನುರಾಧ ಮಾತನಾಡಿ, ಶರಣರ ಚಿಂತನೆ ಪ್ರಸ್ತುತ ಕಾಲಮಾನಕ್ಕೆ ಅತ್ಯಗತ್ಯ. 30 ದಿನಗಳು ನಡೆಯುವ ಮಾಲಿಕೆಯಲ್ಲಿ ಭಾಗವಹಿಸಿ ವಿಚಾರಗಳನ್ನು ಅರ್ಥಮಾಡಿಕೊಂಡರೆ ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಬೆಳೆಯಬಹುದು ಎಂದರು.
ಮಲ್ಲಿಕಾರ್ಜುನ ಮರುಘರಾಜೇಂದ್ರ ಸ್ವಾಮೀಜಿ, ಮಠದ ಮುಖಂಡ ರುದ್ರಾರಾಧ್ಯ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.