ಶಿವಮೊಗ್ಗ: ಭದ್ರಾ ಬಲದಂಡೆ ನಾಲೆಯ ಮೂಲಕ ಚಿತ್ರದುರ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಪೂರೈಸಲು ಕೈಗೆತ್ತಿಕೊಂಡಿದ್ದ ಕಾಮಗಾರಿ ಶನಿವಾರ ಮುಕ್ತಾಯಗೊಂಡಿದೆ.
ಕಾಲುವೆಯಿಂದ ನೀರು ಕೊಂಡೊಯ್ಯುವ ಪೈಪ್ಲೈನ್ ಭಾಗಕ್ಕೆ ಕ್ರೇನ್ ಮೂಲಕ ಬೃಹತ್ ಗೇಟ್ ಅಳವಡಿಸುವುದರೊಂದಿಗೆ ಅಧಿಕೃತವಾಗಿ ಕಾಮಗಾರಿ ಪೂರ್ಣಗೊಳಿಸಲಾಯಿತು.
‘ಅದು ಕ್ಯೂರಿಂಗ್ ಆಗಿ ಮೊದಲಿನಂತೆ ಆಗಲು ಇನ್ನೊಂದು ವಾರ ಬೇಕಾಗುತ್ತದೆ. ನಂತರ ಜಲಾಶಯದಿಂದ ಕಾಲುವೆಗೆ ನೀರು ಹರಿಸಲಾಗುತ್ತದೆ. ತುರ್ತಾಗಿ ಕಾಲುವೆಗೆ ನೀರು ಹರಿಸಬೇಕಿರುವುದರಿಂದ ಹಗಲು–ರಾತ್ರಿ ಸಮರೋಪಾದಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡು ಕೆಲಸ ಮುಗಿಸಲಾಗಿದೆ’ ಎಂದು ಮೂಲಗಳು ತಿಳಿಸಿವೆ.
‘ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ತಜ್ಞರು ನೀಡಿದ ವರದಿ ಆಧರಿಸಿ ಕುಡಿಯುವ ನೀರಿನ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ಇಲ್ಲಿಂದ ಪೈಪ್ ಮೂಲಕ ಬಿಆರ್ಪಿಯ ಶುದ್ಧೀಕರಣ ಘಟಕಕ್ಕೆ ದಿನಕ್ಕೆ 30 ಕ್ಯುಸೆಕ್ ನೀರು ಹರಿಸಲಾಗುತ್ತದೆ. ಈಗ ಅಳವಡಿಸಿರುವ ಗೇಟ್ ತೆರೆದು ನಿಗದಿತ ಪ್ರಮಾಣದಲ್ಲಿ ಕುಡಿಯುವ ನೀರಿನ ಯೋಜನೆಗೆ ನೀರು ಹರಿಸುತ್ತಿದ್ದಂತೆಯೇ ಅದನ್ನು ಮುಚ್ಚಲಾಗುತ್ತದೆ. ಹೀಗಾಗಿ ನೀರಾವರಿ ಉದ್ದೇಶಕ್ಕೆ ಹರಿಸುವ ನೀರಿನ ಪ್ರಮಾಣ ಇಲ್ಲವೇ ಅದರ ವೇಗ ಯಾವುದೇ ಕಾರಣಕ್ಕೂ ಕಡಿಮೆ ಆಗುವುದಿಲ್ಲ. ಕೊನೆಯ ಭಾಗದ ರೈತರಿಗೆ ಈಗ ಹರಿದು ಹೋಗುತ್ತಿರುವ ನೀರಿನಲ್ಲಿ ಎಳ್ಳಷ್ಟೂ ಕೊರತೆ ಆಗುವುದಿಲ್ಲ’ ಎಂದು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ವಿಭಾಗದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಜುಲೈ 21ಕ್ಕೆ ಐಸಿಸಿ ಸಭೆ?
‘ಬಲದಂಡೆ ನಾಲೆ ಈಗ ಪೂರ್ಣ ಪ್ರಮಾಣದಲ್ಲಿ ಸಿದ್ಧವಾಗಿದೆ. ಹೀಗಾಗಿ ನೀರು ಹರಿಸಲು ಜುಲೈ 21ರಂದು ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆ ಕರೆಯಲು ನಿರ್ಧರಿಸಲಾಗಿದೆ. ಅದು ಇನ್ನೂ ಅಧಿಕೃತವಾಗಿ ಘೋಷಣೆ ಆಗಬೇಕಿದೆ. ಸಭೆ ಮುಗಿದ ತಕ್ಷಣ ನೀರು ಹರಿಸಲಾಗುತ್ತದೆ. ಜಲಾಶಯ ಭರ್ತಿಯತ್ತ ಸಾಗುತ್ತಿರುವುದರಿಂದ ನಿಯಮಾವಳಿಯಂತೆ ಕಾಲುವೆಗೆ ನೀರು ಹರಿಸಬೇಕಿದೆ’ ಎಂದು ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹೇಳುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.