ಶಿವಮೊಗ್ಗ: ಎನ್ಇಎಸ್ ಮೈದಾನದಲ್ಲಿ ಏ.24ರಂದು ಬೆಳಿಗ್ಗೆ 10ಕ್ಕೆ ನಡೆಯುವ ಭೋವಿ ಭವನದ ಉದ್ಘಾಟನೆ ಹಾಗೂ ಸಮಾವೇಶದ ಎಲ್ಲಾ ಸಿದ್ಧತೆಗಳೂ ಅಂತಿಮ ಹಂತಕ್ಕೆ ಬಂದಿವೆ ಎಂದು ಚಿತ್ರದುರ್ಗ-ಬಾಗಲಕೋಟೆ ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಸಮಾವೇಶಕ್ಕೆ ಅಂದಾಜು ₹ 14 ಲಕ್ಷ ವೆಚ್ವದಲ್ಲಿ ಬೃಹತ್ ವೇದಿಕೆ ನಿರ್ಮಾಣವಾಗಿದ್ದು, 30 ಸಾವಿರ ಜನರಿಗೆ ಆಸನದ ವ್ಯವಸ್ಥೆ ಮಾಡಲಾಗುತ್ತಿದೆ. ಊಟದ ವ್ಯವಸ್ಥೆಗೂ ಸಿದ್ಧತೆ ನಡೆದಿದೆ. 3 ಬೃಹತ್ ವೇದಿಕೆಗೆ ಸಮಾಜಕ್ಕಾಗಿ ದುಡಿದವರ ಹೆಸರನ್ನು ಗೌರವಾರ್ಥವಾಗಿ ಇಡಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಹಾದ್ವಾರದಿಂದ ಹಿಡಿದು ಮುಖ್ಯ ವೇದಿಕೆ, ಸನ್ಮಾನಗಳ ವೇದಿಕೆಗೆ ಪ್ರತ್ಯೇಕವಾಗಿ ಹೆಸರಿಡಲಾಗಿದೆ. ಸಮಾವೇಶಕ್ಕೆ ಜಿಲ್ಲೆಯಿಂದ, ಹೊರ ಜಿಲ್ಲೆಯಿಂದ ಬರುವವರಿಗೆ ಬಸ್ ವ್ಯವಸ್ಥೆ ಮಾಡಲಾಗುತ್ತಿದೆ. ಎಲ್ಲರನ್ನು ಸುರಕ್ಷಿತ ವಾಗಿ ಕರೆದುಕೊಂಡು ಬರಲು ಸೂಚಿಸಲಾಗಿದೆ ಎಂದರು.
ಯುವಕರಲ್ಲಿ ಸಮಾಜ ಸಂಘಟಿಸುವ ಶಕ್ತಿ ತುಂಬಲು ಸಮಾವೇಶಕ್ಕೂ ಮುನ್ನ ಬೈಕ್ ರ್ಯಾಲಿಯನ್ನು ಹಮ್ಮಿಕೊಂಡಿದ್ದು, ಭದ್ರಾವತಿಯ ಗಡಿಭಾಗವಾದ ಹಂಚಿನ ಸಿದ್ದಾಪುರದಿಂದ ಬೈಕ್ ರ್ಯಾಲಿಗೆ ಚಾಲನೆ ನೀಡಿದ್ದು, ರ್ಯಾಲಿಯು ಹೊಳೆಹೊನ್ನೂರು ಮಾರ್ಗವಾಗಿ ಶಿವಮೊಗ್ಗಕ್ಕೆ ಬಂದು ನಂತರ ಶಿವಮೊಗ್ಗದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಲಿದೆ ಎಂದರು.
ಜಿಲ್ಲಾ ಭೋವಿ ಸಮಾಜದ ಅಧ್ಯಕ್ಷ ಎಸ್. ರವಿಕುಮಾರ್ ಮಾತನಾಡಿ, ‘ಸಮಾಜದ ಅನೇಕ ದಾನಿಗಳೇ ಸಮಾವೇಶದ ಸಕಲ ಖರ್ಚು ವೆಚ್ಚಗಳನ್ನು ಭರಿಸುತ್ತಿದ್ದು, ಸಮಾಜದ ಪ್ರಗತಿಗೆ ಅವರು ಹೆಗಲು ಕೊಟ್ಟಿದ್ದಾರೆ. ಅವರಿಗೂ ಸಮಾವೇಶದಲ್ಲಿ ಸನ್ಮಾನಿಸಲಾಗುವುದು’ ಎಂದು ಮಾಹಿತಿ ನೀಡಿದರು.
ಸಮಾವೇಶಕ್ಕೆ 25 ಸಾವಿರ ಸಮಾಜದವರು ಭಾಗವಹಿಸುತ್ತಿದ್ದು, ಅವರು ತಮ್ಮ ಸ್ವಂತ ಖರ್ಚಿನಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದ ಶಾಸಕರು, ಮಾಜಿ ಶಾಸಕರು, ಸಂಸದರು, ಚುನಾಯಿತ ಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಧೀರರಾಜ್ ಹೊನ್ನವಿಲೆ, ಜಗಧೀಶ್, ವೀರಭದ್ರಪ್ಪ ಪೂಜಾರ್, ಗಣೇಶ್, ಹರ್ಷ ಭೋವಿ, ಶಿವಕುಮಾರ್, ರಾಮಕೃಷ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.