ಭದ್ರಾವತಿ: ಹಳೇನಗರದ ಕಾಳಿಕಾಂಬ ಸೇವಾ ಸಮಿತಿ ಹಾಗು ವಿಶ್ವಕರ್ಮ ಸಮುದಾಯದ ವತಿಯಿಂದ ಈಚೆಗೆ ಸಾವಿತ್ರಿ ಪೀಠಾಧೀಶ್ವರ ಜಗದ್ಗುರು ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿಗಳ 8ನೇ ವರ್ಷದ ಚಾತುರ್ಮಾಸ ವ್ರತ ಪೂಜಾನುಷ್ಠಾನದ ಸೀಮೊಲಂಘನ ಕಾರ್ಯಕ್ರಮ ಹಳೇನಗರದ ಕಾಳಿಕಾಂಬ ದೇವಸ್ಥಾನದಲ್ಲಿ ಯಶಸ್ವಿಯಾಗಿ ಜರುಗಿತು.
ವಡ್ಡನಹಾಳ್ ಮಠದ ಗುರು ಕುಟೀರದಿಂದ ಬೆಳಿಗ್ಗೆ ಹೊರಟ ಶ್ರೀಗಳು ಕಾಳಿಕಾಂಬ ದೇವಸ್ಥಾನಕ್ಕೆ ಆಗಮಿಸಿ ದೇವಿಯ ದರ್ಶನ ಪಡೆದರು. ನಂತರ ಭಕ್ತರಿಂದ ಶ್ರೀಗಳ ಪಾದಪೂಜೆ ನೆರವೇರಿತು.
ಕಾಳಿಕಾಂಬ ದೇವಸ್ಥಾನದ ಆವರಣದಲ್ಲಿ ಜರುಗಿದ ಧಾರ್ಮಿಕ ಸಭೆಯ ಸಾನ್ನಿಧ್ಯ ವಹಿಸಿದ್ದ ಶ್ರೀಗಳು ಚಾತುರ್ಮಾಸ ವ್ರತ ಧಾರ್ಮಿಕ ಆಚರಣೆಯ ಮಹತ್ವ ತಿಳಿಸಿದರು. ಕಾಳಿಕಾಂಬ ಸೇವಾ ಸಮಿತಿ ಹಾಗು ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಿ.ಕೆ ಶ್ರೀನಾಥ್ ಅಧ್ಯಕ್ಷತೆ ವಹಿಸಿದ್ದರು.
ವಡ್ಡನಹಾಳ್ ಮಠದ ಅಧ್ಯಕ್ಷ ಟಿ. ಮಹೇಂದ್ರಚಾರ್, ವಿಶ್ವಕರ್ಮ ಸಮುದಾಯದ ಗೌರವಾಧ್ಯಕ್ಷ ಬಿ.ಎಲ್. ನಾಗರಾಜ, ಕಾರ್ಯಾಧ್ಯಕ್ಷ ಸಿ. ರಾಮಾಚಾರಿ, ಗಾಯಿತ್ರಿ ವಿಶ್ವಕರ್ಮ ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಭಾಗ್ಯಮ್ಮ ಶಾಂತಾಚಾರ್, ಅಧ್ಯಕ್ಷೆ ಲಕ್ಷ್ಮೀದೇವಮ್ಮ ಕೃಷ್ಣಮೂರ್ತಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.