ADVERTISEMENT

‘ಕಾಯಕಕ್ಕೆ ಆದ್ಯತೆ ನೀಡಿದ ಚೌಡಯ್ಯ’

​ಪ್ರಜಾವಾಣಿ ವಾರ್ತೆ
Published 22 ಜನವರಿ 2022, 5:02 IST
Last Updated 22 ಜನವರಿ 2022, 5:02 IST
ಸೊರಬದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಗಂಗಾಮತಸ್ಥ ಸಮಾಜ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿದರು.
ಸೊರಬದಲ್ಲಿ ಅಂಬಿಗರ ಚೌಡಯ್ಯ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ತಾಲ್ಲೂಕು ಗಂಗಾಮತಸ್ಥ ಸಮಾಜ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿದರು.   

ಸೊರಬ: ಜಾತಿ ಮೀರಿ ಕಾಯಕಕ್ಕೆ ಆದ್ಯತೆ ನೀಡಿ ಸಮಾಜವನ್ನು ಮೇಲೆತ್ತಿದ ನಿಜ ಶರಣ ಅಂಬಿಗರ ಚೌಡಯ್ಯ. ಅವರ ವಚನಗಳು ಎಂದಿಗೂ ಪ್ರಸ್ತುತ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಮಂಜಪ್ಪ ಹುಲ್ತಿಕೊಪ್ಪ ಹೇಳಿದರು.

ಪಟ್ಟಣದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಗಂಗಾಮತಸ್ಥ ಸಮಾಜದಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಂಬಿಗರ ಚೌಡಯ್ಯ ಅವರ 902ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ದಡದಿಂದ ದಡಕ್ಕೆ ಜನರನ್ನು ಅಷ್ಟೇ ಕೊಂಡೊಯ್ಯುತ್ತಿಲ್ಲ, ಹುಟ್ಟು ಸಾವಿನ ಭವದ ಒಳಗೆ ಜನರನ್ನು ಅಧ್ಯಾತ್ಮದತ್ತ ಕೊಂಡೊಯ್ಯುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಅಂಬಿಗನ ವೃತ್ತಿಯ ಬಗ್ಗೆ ಹೇಳಿದ ಅಂಬಿಗರ ಚೌಡಯ್ಯ ಅವರು, ಜೀವಪರವಾದ ಆತ್ಮಕ್ಕೆ ಯಾವುದೇ ಜಾತಿ ಲೇಪ ಬಳಿಯದೆ ಬದುಕು ಮುನ್ನಡೆಸಬೇಕು ಎಂದು ಸಾರಿದ್ದರು’ ಎಂದು ಹೇಳಿದರು.

ADVERTISEMENT

ತಾಲ್ಲೂಕು ಗಂಗಾಮತಸ್ಥ ಸಮಾಜದ ಅಧ್ಯಕ್ಷ ದೇವೇಂದ್ರಪ್ಪ ಮಾತನಾಡಿ, ‘12ನೇ ಶತಮಾನದ ವಚನಕಾರರು ಸಾಮಾಜಿಕ ಸುಧಾರಣೆಗೆ ಒತ್ತು ನೀಡಿದ್ದು, ಅಂಬಿಗರ ಚೌಡಯ್ಯ ಅವರ ಪಾತ್ರವೂ ದೊಡ್ಡದಿದೆ. ದಾರ್ಶನಿಕರನ್ನು ಜಾತಿಗೆ ಸೀಮಿತಮಾಡದೆ ಅವರ ತತ್ವ, ಸಿದ್ಧಾಂತಗಳನ್ನು ಮೈಗೂಡಿಸಿಕೊಳ್ಳಬೇಕು’ ಎಂದು ತಿಳಿಸಿದರು.

ಪುರಸಭೆ ಪ್ರಭಾರ ಅಧ್ಯಕ್ಷ ಮಧುರಾಯ್ ಜಿ. ಶೇಟ್ ಮಾತನಾಡಿ, ‘ಪೋಷಕರು ಮಕ್ಕಳಲ್ಲಿ ವಚನ ಸಾಹಿತ್ಯ ಬಿತ್ತುವ ಜತೆಗೆ, ಓದುವುದಕ್ಕೆ ಪ್ರೇರೇಪಿಸಬೇಕು’ ಎಂದರು.

ಗ್ರೇಡ್-2 ತಹಶೀಲ್ದಾರ್ ಮಂಜುಳಾ ಹೆಗಡಾಳ್, ಪುರಸಭೆ ಸದಸ್ಯರಾದ ಎಂ.ಡಿ. ಉಮೇಶ್, ಈರೇಶ್ ಮೇಸ್ತ್ರಿ, ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ಚಂದ್ರಶೇಖರ್ ಮಾತನಾಡಿದರು. ಪುರಸಭೆ ಮುಖ್ಯಾಧಿಕಾರಿ ರಮೇಶ್, ಶಿರಸ್ತೇದಾರ್ ಎಸ್.ವಿಜಯ್ ಇದ್ದರು.

ಪವಿತ್ರಾ ಮತ್ತು ಸುಪ್ರಿತಾ ಪ್ರಾರ್ಥಿಸಿದರು. ವಿನೋದ್ ಸ್ವಾಗತಿಸಿದರು. ಪ್ರವೀಣ್ ನಿರೂಪಿಸಿದರು. ಅರುಣ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.