ADVERTISEMENT

ತಾಯಿ ಸ್ವರೂಪದ ಪೌರಕಾರ್ಮಿಕರು

ಮಹಾನಗರ ಪಾಲಿಕೆಯಿಂದ ಪೌರಕಾರ್ಮಿಕ ದಿನ ಆಚರಣೆ: ಈಶ್ವರಪ್ಪ ಬಣ್ಣನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 6:01 IST
Last Updated 24 ಸೆಪ್ಟೆಂಬರ್ 2022, 6:01 IST
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು
ಶಿವಮೊಗ್ಗದಲ್ಲಿ ಶುಕ್ರವಾರ ನಡೆದ ಪೌರಕಾರ್ಮಿಕರ ದಿನ ಕಾರ್ಯಕ್ರಮದಲ್ಲಿ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿದರು   

ಶಿವಮೊಗ್ಗ: ಮನೆಯಲ್ಲಿ ತಾಯಿ ಹೇಗೆ ಬೇಸರವಿಲ್ಲದೆ ಎಲ್ಲ ರೀತಿಯ ಸ್ವಚ್ಚತೆ ಕಾರ್ಯ ಕೈಗೊಳ್ಳುವಳೋ ಅದೇ ತರಹ ಎಲ್ಲ ರೀತಿಯ ಸ್ವಚ್ಚತೆಯನ್ನು ಕೈಗೊಳ್ಳುವ ತಾಯಿ ರೂಪದ ಜನ ಪೌರ ಕಾರ್ಮಿಕರು ಎಂದು ಶಾಸಕ ಕೆ.ಎಸ್.ಈಶ್ವರಪ್ಪ ಬಣ್ಣಿಸಿದರು.

ಪಾಲಿಕೆಯಿಂದ ಶುಕ್ರವಾರ ನಗರದಲ್ಲಿ ಏರ್ಪಡಿಸಿದ್ದ ಪೌರಕಾರ್ಮಿಕ ದಿನಾಚರಣೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೌರಕಾರ್ಮಿಕರ ಬೇಡಿಕೆ ಹಲವಾರು ಇದ್ದರೂ, ಈಡೇರದಿದ್ದರೂ ತಮ್ಮ ಕಾಯಕ ಬಿಡದೇ ಮುಂದುವರೆಸಿಕೊಂಡು ಹೋಗುವ ತಾಯಿಯಂತಹ ಜನ. ನಾವೆಲ್ಲ ಒಂದೇ, ಸಮಾಜ ಶುದ್ದಿ ಮಾಡುವ ಕೆಲಸ ಎಲ್ಲ ಸೇರಿ ಮಾಡೋಣ ಎಂದರು.
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 6 ಎಕರೆ 9 ಗುಂಟೆ ಜಮೀನಿನಲ್ಲಿ ಒಟ್ಟು 168 ಮನೆಗಳ ನಿರ್ಮಾಣ ಆಗುತ್ತಿದೆ. ಶೇ 60 ರಷ್ಟು ಕೆಲಸ ಆಗಿದೆ. ಒಂದು ಮನೆಗೆ ₹8.25 ಲಕ್ಷ ವೆಚ್ಚವಾಗುತ್ತದೆ. ಅದರಲ್ಲಿ ಫಲಾನುಭವಿ ತಲಾ ₹1.5 ಲಕ್ಷ ನೀಡಬೇಕು. ಆ ಹಣ ಪಾಲಿಕೆಯ ಶೇ 24.10 ಅನುದಾನದಲ್ಲಿ ಭರಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.

ADVERTISEMENT

ಮಾರ್ನಮಿಬೈಲ್ ಮತ್ತು ಹೊಸಮನೆಯಲ್ಲಿ ಪೌರಕಾರ್ಮಿಕರು ವಾಸಿಸುತ್ತಿರುವ 120 ಮನೆಗಳಿಗೆ ಹಕ್ಕು ಪತ್ರ ನೀಡಲಾಗುವುದು. ಸಿದ್ದೇಶ್ವರ ನಗರದಲ್ಲಿ ₹4.5 ಕೋಟಿ ವೆಚ್ಚದಲ್ಲಿ ಪೌರಕಾರ್ಮಿಕರ ಸಮುದಾಯ ಭವನ ನಿರ್ಮಾಣವಾಗುತ್ತಿದೆ ಎಂದು ಹೇಳಿದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕೋವಿಡ್ ಸಂಕಷ್ಟ ಸಮಯದಲ್ಲಿ ನಿಮ್ಮ ಜೀವದ ಹಂಗು ತೊರೆದು ದೇಶದ ಆರೋಗ್ಯ ಕಾಪಾಡಿದ್ದು ಅವಿಸ್ಮರಣೀಯ
ಎಂದರು.

ಪೌರಕಾರ್ಮಿಕರನ್ನು ನೇರ ಪಾವತಿಯಿಂದ ಖಾಯಂ ಪಾವತಿಗೆ ಮತ್ತು ಗೌರವಧನ ₹3,500ದಿಂದ ₹7,000ಕ್ಕೆ ಹೆಚ್ಚಿಸುವ ಮೂಲಕ ಸರ್ಕಾರ ಉತ್ತಮ ನಿಲುವು ಕೈಗೊಂಡಿದೆ. ಹಾಗೆಯೇ ಲೋಡರ್ಸ್, ಡ್ರೈವರ್‌ಗಳು, ಕ್ಲೀನರ್ಸ್ ಇತರೆ ಹೊರಗುತ್ತಿಗೆ ಸಿಬ್ಬಂದಿಯ ಬೇಡಿಕೆಗಳನ್ನು ಸಹ ಹಂತ ಹಂತವಾಗಿ ಈಡೇರಿಸಲಾಗುವುದು ಎಂದರು.

ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್ ಮಾತನಾಡಿದರು. ಮೇಯರ್‌ ಸುನೀತ ಅಣ್ಣಪ್ಪ, ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಮಾರಪ್ಪ ಮಾತನಾಡಿದರು. ಆಯುಕ್ತ ಕೆ.ಮಾಯಣ್ಣಗೌಡ ಸ್ವಾಗತಿಸಿದರು. ಉಪಮೇಯರ್ ಶಂಕರ್ ಗನ್ನಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.