ADVERTISEMENT

ಸಿಗಂದೂರಿನಲ್ಲಿ ಗೂಡಂಗಡಿ, ಹೋಟೆಲ್‍ಗಳ ತೆರವು

​ಪ್ರಜಾವಾಣಿ ವಾರ್ತೆ
Published 9 ಮೇ 2021, 4:40 IST
Last Updated 9 ಮೇ 2021, 4:40 IST
ನ್ಯಾಯಾಲಯದ ಆದೇಶದಂತೆ ಸಾಗರ ತಾಲ್ಲೂಕಿನ ದೇವಸ್ಥಾನ ಜಾಗದಲ್ಲಿದ್ದ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಯಿತು.
ನ್ಯಾಯಾಲಯದ ಆದೇಶದಂತೆ ಸಾಗರ ತಾಲ್ಲೂಕಿನ ದೇವಸ್ಥಾನ ಜಾಗದಲ್ಲಿದ್ದ ಕಟ್ಟಡಗಳನ್ನು ಶನಿವಾರ ತೆರವುಗೊಳಿಸಲಾಯಿತು.   

ಶಿವಮೊಗ್ಗ: ಹೈಕೋರ್ಟ್ ಆದೇಶದಂತೆ ಸಾಗರ ತಾಲ್ಲೂಕಿನ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇಗುಲದ ಆಡಳಿತ ಮಂಡಳಿಯು ತನ್ನ ಸುಪರ್ದಿಯಲ್ಲಿದ್ದ ಕೆಲವು ಕಟ್ಟಡಗಳನ್ನು ತೆರವು ಮಾಡಿದೆ.

ಲಕ್ಷ್ಮೀನಾರಾಯಣ, ಗೋವರ್ಧನ್ ಹಾಗೂ ಶಿವರಾಜ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ನೇತೃತ್ವದ ವಿಭಾಗೀಯ ಪೀಠ ದೇವಾಲಯ ಹೊರತಾದ ಒತ್ತುವರಿ ಜಾಗವನ್ನು ತೆರವು ಮಾಡುವಂತೆ ಆದೇಶ ನೀಡಿತ್ತು.

ನ್ಯಾಯಾಲಯದ ಸೂಚನೆ ಒಪ್ಪಿಕೊಂಡಿದ್ದ ದೇವಸ್ಥಾನ ಆಡಳಿತ ಮಂಡಳಿಯು ತನ್ನ ಸುಪರ್ದಿಯಲ್ಲಿದ್ದ ಒಟ್ಟು 12.16 ಎಕರೆ ಭೂಮಿಯಲ್ಲಿ 6 ಎಕರೆ 16 ಗುಂಟೆ ಭೂಮಿಯನ್ನು ಸ್ವಯಂ ಖುಲ್ಲಾ ಮಾಡಿಕೊಡಲು ಒಪ್ಪಿಕೊಂಡಿತ್ತು. ಈಗ ನ್ಯಾಯಾಲಯದ ಆದೇಶದಂತೆ ಸಿಗಂದೂರು ಚೌಡಮ್ಮ ದೇವಿ ಟ್ರಸ್ಟ್ ಆಡಳಿತ ಮಂಡಳಿಯು ದೇವಸ್ಥಾನದ ಮುಂಭಾಗದಲ್ಲಿದ್ದ 22 ಗೂಡಂಗಡಿ, ಕಾರ್ಮಿಕರ ವಾಸದ ಕಟ್ಟಡ ಎಲ್ಲವನ್ನೂ ತೆರವು ಮಾಡಿದೆ.

ADVERTISEMENT

ಶನಿವಾರವೂ ತೆರವು ಕಾರ್ಯವನ್ನು ಮುಂದುವರಿಸಿದ್ದ ಆಡಳಿತ ಮಂಡಳಿಯು ಸುಳ್ಳಳ್ಳಿ ನಾಡಕಚೇರಿ ಉಪ ತಹಸೀಲ್ದಾರ್ ಮಾಲಿನಿ ಅವರ ಸಮ್ಮುಖದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ದೇವಾಲಯದ ಸಿಬ್ಬಂದಿಯೇ ಸರಕು, ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಿ ಕಟ್ಟಡವನ್ನು ತೆರವು ಮಾಡಿದರು.

ಸಾಗರ ಗ್ರಾಮಾಂತರ ಪೊಲೀಸರಿಂದ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.