ADVERTISEMENT

ಹೊಸಕೆರೆ ಅಣೆಕಟ್ಟು ಯೋಜನೆ | ಸಿಎಂ, ಶಾಸಕರ ನಡುವೆ ಭಿನ್ನರಾಗ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2019, 11:19 IST
Last Updated 31 ಆಗಸ್ಟ್ 2019, 11:19 IST

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿಯವರು ಸೆ.7, 8 ರಂದು ಬೆಂಗಳೂರಿಗೆ ಬರಲಿದ್ದು,ಈ ಸಂದರ್ಭದಲ್ಲಿ ರಾಜ್ಯದ ಅತಿವೃಷ್ಟಿಯ ಸ್ಥಿತಿಗತಿಯ ಬಗ್ಗೆ ರಾಜಭವನದಲ್ಲಿ ಪ್ರೆಸೆಂಟೇಷನ್‌ ಮೂಲಕ ಮನವರಿಕೆ ಮಾಡಿ, ಹೆಚ್ಚಿನ ನೆರವಿಗೆ ಮನವಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಈಗಾಗಲೇ ಕೇಂದ್ರದ ತಂಡ ರಾಜ್ಯದ ನೆರೆಹಾನಿಯ ಬಗ್ಗೆ ಸಮೀಕ್ಷೆ ನಡೆಸಿಕೊಂಡು ಹೋಗಿದೆ. ರಾಜ್ಯದಲ್ಲಿ ಸುಮಾರು 1 ಲಕ್ಷ ಮನೆಗಳನ್ನು ನಿರ್ಮಿಸಬೇಕಾಗಿದ್ದು, ಹೆಚ್ಚಿನ ಪರಿಹಾರ ನೀಡಬೇಕಾಗಿದೆ. ಹಾಗಾಗಿ ಕೇಂದ್ರದಿಂದ ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ’ ಎಂದರು.

ಭಿನ್ನರಾಗ

ADVERTISEMENT

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಕಲ್ಲೊಡ್ಡು ಹೊಸಕೆರೆ ಅಣೆಕಟ್ಟು ಯೋಜನೆಗೆ ಸಂಬಂಧಿಸಿದಂತೆ ಸ್ವಪಕ್ಷದಿಂದಲೇ ಭಿನ್ನರಾಗ ಕೇಳಿಬಂತು. ಯಡಿಯೂರಪ್ಪ ಮಾತನಾಡಿ, ಕಲ್ಲೊಡ್ಡು ಯೋಜನೆಯಿಂದ ಕೆಲವರಿಗೆ ತೊಂದರೆಯಾದರೆ, ಅನೇಕರಿಗೆ ಅನುಕೂಲ ಆಗುತ್ತದೆ. ಹಾಗಾಗಿ ಈ ಯೋಜನೆಯನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದರು. ಇದರಿಂದ ಮುಖ್ಯಮಂತ್ರಿ ಪಕ್ಕದಲ್ಲೇ ಇದ್ದ ಸಾಗರದ ಬಿಜೆಪಿ ಶಾಸಕ ಹರತಾಳು ಹಾಲಪ್ಪಗೆ ಮುಜುಗರ ಉಂಟಾಯಿತು.

ನಂತರ ಯಡಿಯೂರಪ್ಪ ಕಾರನ್ನೇರಿ ಸಾಗುತ್ತಿದ್ದಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ‘ಈಗಾಗಲೇ ಸಾಗರದ ಜನರು ವಿವಿಧ ಕಾರಣಗಳಿಗಾಗಿ ಸಂತ್ರಸ್ತರಾಗಿದ್ದಾರೆ. ನಾನು ಕೂಡ ಒಬ್ಬ ಸಂತ್ರಸ್ತ. ಹಾಗಾಗಿ ಈ ಯೋಜನೆಗೆ ತಮ್ಮ ಸಂಪೂರ್ಣ ವಿರೋಧವಿದೆ. ಈ ಬಗ್ಗೆ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಯೋಜನೆ ಕೈಬಿಡುವಂತೆ ಮನವೊಲಿಸಲಾಗುವುದು ಎಂದರು.

ಉಸ್ತುವಾರಿ ಸಚಿವ: ನಂತರ ನಡೆದ ನೆರೆ ಪರಿಹಾರ ಕಾರ್ಯಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಚಿವ ಕೆ.ಎಸ್.ಈಶ್ವರಪ್ಪ ಅವರನ್ನು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಘೋಷಣೆ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.