ತೀರ್ಥಹಳ್ಳಿ: ‘ಶಿವಮೊಗ್ಗ ರಂಗಾಯಣವನ್ನು ಹಳ್ಳಿಗೆ ತರುವ ಉದ್ದೇಶದಿಂದ ವಿವಿಧ ರಂಗ ಚಟುವಟಿಕೆ ನಡೆಸುತ್ತಿದ್ದೇವೆ. ಅದರ ಭಾಗವಾಗಿ ಜ.17, 18, 19 ರಂದು ವಿದ್ಯಾರ್ಥಿಗಳಿಂದ ಕಾಲೇಜು ರಂಗೋತ್ಸವ ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದೇವೆ’ ಎಂದು ಶಿವಮೊಗ್ಗ ರಂಗಾಯಣದ ನಿರ್ದೇಶಕ ಸಂದೇಶ್ ಜವಳಿ ಹೇಳಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಂಗಾಯಣದ ವ್ಯಾಪ್ತಿಗೆ ಬರುವ 9 ಜಿಲ್ಲೆಗಳ ಪೈಕಿ 5 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ನಡೆಯಬೇಕಿದ್ದ ಕಾಲೇಜು ರಂಗೋತ್ಸವವನ್ನು ತೀರ್ಥಹಳ್ಳಿಯಲ್ಲಿ ಆಯೋಜಿಸಿದ್ದು, ಗೃಹ ಸಚಿವ ಆರಗ ಜ್ಞಾನೇಂದ್ರ ಉದ್ಘಾಟಿಸಲಿದ್ದಾರೆ. ಶ್ರೀಹರ್ಷ ಜಿ. ಗೋಭಟ್ ನಿರ್ದೇಶನದ ‘ಚಿತ್ರಪಟ’, ಡಾ. ಗುರುಪ್ರಸಾದ್ ಟಿ.ಆರ್. ನಿರ್ದೇಶನದ ‘ವ್ಯೂಹ’, ಶ್ರೀಕಾಂತ್ ಕುಮಟಾ ನಿರ್ದೇಶನದ ‘ತುರಬ ಕಟ್ಟುವ ಹದನ’ ನಾಟಕ ನಡೆಯಲಿದೆ’ಎಂದು ಹೇಳಿದರು.
ರಂಗಕರ್ಮಿ ಕೆ.ಜಿ. ಮಹಾಬಲೇಶ್ವರ್ ಸಮಾರೋಪ ನುಡಿಗಳನ್ನು ಆಡಲಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಶಬನಮ್, ರಂಗಸಮಾಜದ ಸದಸ್ಯರಾದ ಶ್ರೀಧರ ಹೆಗಡೆ, ಆರ್.ಎಸ್. ಹಾಲಸ್ವಾಮಿ, ಜೀವನರಾಂ ಸುಳ್ಯ, ಪ್ರಾಂಶುಪಾಲರಾದ ಡಾ. ನಾಗಭೂಷಣ ಎಚ್.ಎಸ್., ಯುವರಾಜ್ ಬಿ.ಎಚ್., ಎಚ್.ಡಿ. ಧರ್ಮಣ್ಣ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಕುರಿಯಾ ಕೋಸ್, ಕೂಳೂರು ಸತ್ಯನಾರಾಯಣ ರಾವ್, ಕಾಲೇಜು ರಂಗೋತ್ಸವ ಪ್ರಧಾನ ಸಂಚಾಲಕ ಪ್ರವೀಣ್ ಎಸ್. ಹಾಲ್ಮತ್ತೂರು ಭಾಗವಹಿಸಲಿದ್ದಾರೆ ಎಂದುತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರವೀಣ್ ಎಸ್. ಹಾಲ್ಮತ್ತೂರು, ಸಂಚಾಲಕ ಚೇತನ್ ಸಿ. ರಾಯನಹಳ್ಳಿ, ನಿರ್ದೇಶಕ ಶ್ರೀಕಾಂತ್ ಕುಮಟಾ, ಚೇತನ್ ಜಿ., ಶಿವಕುಮಾರ್, ಶ್ರೀಪಾದ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.