ಸೊರಬ: ‘ಸಹಕಾರ ಸಂಘಗಳ ಬಲವರ್ಧನೆಗೆ ಷೇರುದಾರರ ಪಾತ್ರ ಮಹತ್ವವಾಗಿದ್ದು, ನಿಶ್ಚಿತ ಠೇವಣಿಯನ್ನಿಡುವ ನಿಟ್ಟಿನಲ್ಲಿ ಸದಸ್ಯರು ಹೆಚ್ಚಿನ ಒಲವು ತೋರಬೇಕು’ ಎಂದು ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಡಿ.ಎಸ್. ಪ್ರಸನ್ನಕುಮಾರ್ ದೊಡ್ಮನೆ ಹೇಳಿದರು.
ಪಟ್ಟಣದ ಶ್ರೀ ರಂಗ ಕನ್ವೆನ್ಷನ್ ಹಾಲ್ನಲ್ಲಿ ರಂಗನಾಥ ವಿವಿಧೋದ್ದೇಶ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
‘ಶತಮಾನ ಪೂರೈಸಿರುವ ಸಹಕಾರ ಸಂಘವನ್ನು ಬ್ಯಾಂಕ್ ಆಗಿ ಪರಿವರ್ತಿಸುವ ಉದ್ದೇಶ ಹೊಂದಲಾಗಿದೆ. ಹಾಲಿ ಕಾರ್ಯನಿರ್ವಹಿಸುತ್ತಿರುವ ಕಟ್ಟಡವು ಗೋದಾಮು ಮಾದರಿಯಲ್ಲಿತ್ತು. ದಾನಿಗಳ ಸಹಕಾರದೊಂದಿಗೆ ಸಿ.ಸಿ. ಕ್ಯಾಮೆರಾ ಅಳವಡಿಕೆ, ಅಗತ್ಯ ಪೀಠೋಪಕರಣಗಳನ್ನು ಒದಗಿಸಲಾಗಿದೆ. ಕೇವಲ ವ್ಯವಹಾರಿಕವಾಗಿ ಸಹಕಾರಿ ಸಂಘವು ಕಾರ್ಯನಿರ್ವಹಿಸಿದರೆ ಸಾಲದು ಬದಲಿಗೆ ಸಾಮಾಜಿಕ ಕಳಕಳಿ ಅಗತ್ಯ ಎಂಬುದನ್ನು ಮನಗಂಡು ಬಡವರು, ಅಂಗವಿಕಲರು ಪಡಿತರವನ್ನು ತೆಗೆದುಕೊಂಡು ಹೋಗಲು ಖಾಸಗಿ ಸಂಸ್ಥೆಗಳ ಸಹಕಾರದೊಂದಿಗೆ ಉಚಿತ ಆಟೊ ವ್ಯವಸ್ಥೆ ಸಹ ಕಲ್ಪಿಸಲಾಗಿದೆ’ ಎಂದರು.
ಸಹಕಾರ ಸಂಘವು ಪಟ್ಟಣ ಸೇರಿದಂತೆ ಕಸಬಾ, ಉಳವಿ ಮತ್ತು ಚಂದ್ರಗುತ್ತಿಗೆ ಹೋಬಳಿಗೆ ಸೇರಿದ ಗ್ರಾಮಗಳ ವ್ಯಾಪ್ತಿಯನ್ನು ಹೊಂದಿದೆ. ಪ್ರಸ್ತುತ ₹ 4.11 ಲಕ್ಷ ಷೇರುಧನವನ್ನು ಹೊಂದಿದ್ದು, ಈ ಪೈಕಿ ಸರ್ಕಾರದ ಷೇರುಧನವು ₹45,000 ಹೊಂದಿದೆ. ಸಂಘದಲ್ಲಿ 270 ಪೂರ್ಣ ಷೇರುದಾರರನ್ನು ಹೊಂದಲಾಗಿದೆ. ₹ 2.49 ಲಕ್ಷ ಲಾಭಾಂಶ ಗಳಿಸಲಾಗಿದೆ. ಸಾಲ ಪಡೆದವರು ಸಕಾಲದಲ್ಲಿ ಮರುಪಾವತಿ ಮಾಡಿದಾಗ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಲು ಸಾಧ್ಯವಿದೆ ಎಂದರು.
ಸಭೆಯಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಸಂಘದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಮತ್ತು ಸಂಘದ ಹಿರಿಯ ಸದಸ್ಯರು ಹಾಗೂ ದಾನಿಗಳನ್ನು ಸನ್ಮಾನಿಸಲಾಯಿತು.
ಸಂಘದ ನಿರ್ದೇಶಕ ಡಿ.ಎಸ್. ಶಂಕರ್ ಶೇಟ್ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯದರ್ಶಿ ಆರ್. ರವಿಕುಮಾರ್ ವರದಿ ವಾಚಿಸಿದರು. ಸಂಘದ ನಿರ್ದೇಶಕರಾದ ಕೃಷ್ಣಮೂರ್ತಿ ಭಾವೆ, ಜೆ.ಎಸ್. ನಾಗರಾಜ ಜೈನ್, ಶ್ರೀಧರ್ ವಿ. ಶೇಟ್, ಎಲ್. ವೆಂಕಟೇಶ್, ಎಚ್.ಆರ್. ಶ್ರೀಹರ್ಷ, ಸಿ. ರಾಜಶೇಖರ, ಕೆ.ಪಿ. ನೆಮ್ಮದಿ ಶ್ರೀಧರ್, ಎನ್. ಬಸವಂತಪ್ಪ, ಸರಸ್ವತಿ ನಾವುಡಾ, ಸಹಾಯಕ ಕೆ. ರಾಜಶೇಖರಪ್ಪ, ಸಿಬ್ಬಂದಿ ಗೀತಾ ಶಿವಕುಮಾರ್, ಶ್ರೀಕರ ಹೆಗಡೆ, ಕೆ.ಎಂ. ರವಿಕುಮಾರ್ ಸೇರಿದಂತೆ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.