ಶಿವಮೊಗ್ಗ: ಆಯುರ್ವೇದ ಪದ್ಧತಿಯಲ್ಲಿ ಚಿಕಿತ್ಸೆ ನೀಡಲು ತಾವು ಸೂಚಿಸಿದ ಬಾಬಾ ಒಬ್ಬರಿಗೆ ಆಸ್ಪತ್ರೆಒಳಗೆ ಬರಲು ಅವಕಾಶ ನೀಡಬೇಕು ಎಂದುಕೊರೊನಾ ಸೋಂಕಿಗೆ ಒಳಗಾಗಿರುವ ಕಲ್ಲುಗಂಗೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮೀಜಿ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕಾನೂನಿನ ಪ್ರಕಾರ ನಿಗದಿಪಡಿಸಿದ ಚಿಕಿತ್ಸಾ ವಿಧಾನದಲ್ಲೇ ರೋಗಿಗಳ ಆರೈಕೆ ಮಾಡಬೇಕಿದೆ. ಕೋವಿಡ್ ರೋಗಿಗಳಿಗೆ ಆಯುರ್ವೇದ ಪದ್ಧತಿ ಅಡಿ ಚಿಕಿತ್ಸೆ ನೀಡಲು ಅವಕಾಶ ಇಲ್ಲ. ಈ ಪದ್ಧತಿಗೆ ಸರ್ಕಾರ ಅನುಮತಿ ನೀಡಿದರೆ ಮಾತ್ರ ಸಾಧ್ಯ. ಅಲ್ಲದೇ ಹೊರಗಿನ ವ್ಯಕ್ತಿಗಳನ್ನು ಆಸ್ಪತ್ರೆಯ ಒಳಗೆ ಬಿಡಲು ಸಾಧ್ಯವಿಲ್ಲ. ಗುಣಮುಖರಾಗಿ ಹೊರಬಂದ ನಂತರ ಅವರ ನೆರವು ಪಡೆಯಬಹುದು ಎಂದು ಸ್ವಾಮೀಜಿ ಕೋರಿಕೆಯನ್ನು ನಿರಾಕರಿಸಲಾಗಿದೆ.
ತಾವು ಬಯಸಿದ ವಿಧಾನದಲ್ಲೇಚಿಕಿತ್ಸೆ ನೀಡಬೇಕು ಎಂದು ಕೋರಿ ಸ್ವಾಮೀಜಿ, ಜಿಲ್ಲಾಧಿಕಾರಿ, ಡಿಎಚ್ಒ, ಮುಖ್ಯಮಂತ್ರಿ, ಪ್ರಧಾನಮಂತ್ರಿಗೆ ಪತ್ರವನ್ನೂ ಬರೆದಿದ್ದರು. ಪ್ರಸ್ತುತ ಸನ್ನಿವೇಶಕ್ಕೆ ಅಲೋಪತಿ ಸರಿ ಎನಿಸಿದರೂ, ಬಾಲ್ಯದಿಂದಲೂ ದೇಹ ಆಯುರ್ವೇದ ಚಿಕಿತ್ಸೆಗೆ ಒಗ್ಗಿದೆ. ಕೊರೊನಾಗೆ ಸೂಕ್ತ ಮತ್ತು ನಿರ್ದಿಷ್ಟವಾದ ಚಿಕಿತ್ಸೆ ಅಲೋಪತಿಯಲ್ಲೂ ಇಲ್ಲ. ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಾಗಾಗಿ, ತಮ್ಮ ಇಚ್ಚಿಗೆ ಅವಕಾಶ ನೀಡಬೇಕು ಎಂದು ಕೋರಿದ್ದರು. ಶನಿವಾರ ಬಾಬಾ ಒಬ್ಬರು ಚಿಕಿತ್ಸೆ ನೀಡಲು ಬರುತ್ತಿದ್ದಾರೆ. ಅವಕಾಶ ಕೊಡಿ ಎಂದು ಮತ್ತೆ ಮನವಿ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.