ADVERTISEMENT

ಜಿಲ್ಲಾಧಿಕಾರಿ ಕಾರು ಜಪ್ತಿಗೆ ನ್ಯಾಯಾಲಯದ ಆದೇಶ!

ಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡಲು ವಿಳಂಬ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2025, 8:31 IST
Last Updated 6 ಡಿಸೆಂಬರ್ 2025, 8:31 IST
ನಂದ್ಯಪ್ಪ
ನಂದ್ಯಪ್ಪ   

ಶಿವಮೊಗ್ಗ : ಭೂಸ್ವಾಧೀನಪಡಿಸಿಕೊಂಡ ಜಮೀನಿಗೆ ಪರಿಹಾರ ನೀಡದ ಕಾರಣಕ್ಕೆ ನ್ಯಾಯಾಲಯದ ಆದೇಶದ ಮೇರೆಗೆ ಜಿಲ್ಲಾಧಿಕಾರಿ ಕಾರು ಜಪ್ತಿಮಾಡಲು ಅಮೀನರೊಂದಿಗೆ ಬಂದ ರೈತರೊಬ್ಬರು ಶುಕ್ರವಾರ ಜಿಲ್ಲಾಡಳಿತವನ್ನು ಮುಜುಗರಕ್ಕೀಡು ಮಾಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಕರೆದ ಸಭೆಯಲ್ಲಿ ಭಾಗಿಯಾಗಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರಿಗೆ ಆಪ್ತ ಸಹಾಯಕರು ಬಂದು ಜಪ್ತಿಗೆ ನ್ಯಾಯಾಲಯದ ಆದೇಶದ ಪ್ರತಿಯೊಂದಿಗೆ ಅಮೀನರು ಬಂದಿರುವ ವಿಚಾರ ತಿಳಿಸಿದರು. ನಂತರ ಪರಿಹಾರ ವಿತರಣೆಗೆ ಗಡುವು ಮುಂದುವರಿಸುವಂತೆ ನ್ಯಾಯಾಲಯಕ್ಕೆ ಪತ್ರನೀಡಿದ ಜಿಲ್ಲಾಡಳಿತ ಜಪ್ತಿ ಆದೇಶದಿಂದ ತಾತ್ಕಾಲಿಕವಾಗಿ ಮುಕ್ತಿ ಪಡೆಯಿತು.

ಪ್ರಕರಣದ ವಿವರ: ಹರಮಘಟ್ಟದ ನಿವಾಸಿ ನಂದ್ಯಪ್ಪ ಎಂಬುವವರ ಒಂದು ಎಕರೆ ಜಮೀನನ್ನು ಆಶ್ರಯ ಬಡಾವಣೆ ನಿರ್ಮಾಣಕ್ಕೆ ಸರ್ಕಾರಕ್ಕೆ ವಶಪಡಿಸಿಕೊಂಡಿತ್ತು. ಅವರಿಗೆ ಆ ಸಂಬಂಧ ಪರಿಹಾರ ನೀಡಿರಲಿಲ್ಲ. ಹೀಗಾಗಿ ನಂದ್ಯಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಅವರಿಗೆ ₹22,60,000 ಪರಿಹಾರ ನೀಡಲು ಆದೇಶಿಸಿತ್ತು. ಜಿಲ್ಲಾಡಳಿತ ಮೊದಲ ಹಂತದಲ್ಲಿ ₹9 ಲಕ್ಷ ಪರಿಹಾರ ನೀಡಿ ಉಳಿದ ಹಣವನ್ನು ಬಾಕಿ ಇರಿಸಿಕೊಂಡಿತ್ತು.

ADVERTISEMENT

ಸುಮಾರು 20 ವರ್ಷ ಪರಿಹಾರಕ್ಕಾಗಿ ಅಲೆದಾಡಿದ್ದ ನಂದ್ಯಪ್ಪ ಮತ್ತೆ ನ್ಯಾಯಾಲಯದ ಮೊರೆ ಹೋಗಿದ್ದರು. ಪರಿಹಾರದ ಮೊತ್ತವನ್ನು ಹೆಚ್ಚಿಸುವಂತೆ ಮನವಿ ಮಾಡಿದ್ದರು. ನ್ಯಾಯಾಲಯ 2020ರಲ್ಲಿ ಆದೇಶ ನೀಡಿ ಬಡ್ಡಿ ಸಹಿತ ಒಟ್ಟು ₹95,88,282 ಮೊತ್ತದ ಪರಿಹಾರ ಕೂಡಲೇ ಬಿಡುಗಡೆ ಮಾಡಲು ಆದೇಶ ನೀಡಿತ್ತು.

ಆದರೂ ನಂದ್ಯಪ್ಪ ಅವರನ್ನು ಪರಿಹಾರಕ್ಕೆ ಓಡಾಡಿಸಲಾಗಿತ್ತು. ಹೀಗಾಗಿ ನಂದ್ಯಪ್ಪ ಮತ್ತೆ ನ್ಯಾಯಾಲಯದ ಮೊರೆ ಹೋದಾಗ ನ್ಯಾಯಾಲಯ ಜಿಲ್ಲಾಧಿಕಾರಿ ಕಾರನ್ನು ಜಪ್ತಿಮಾಡಲು ವಾರೆಂಟ್ ಹೊರಡಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.