ADVERTISEMENT

ಶುಶ್ರೂಷಕಿಯರ ಮಹತ್ವ ಹೆಚ್ಚಿಸಿದ ಕೋವಿಡ್‌

ವಿಶ್ವ ದಾದಿಯರ ದಿನದ ಕಾರ್ಯಕ್ರಮದಲ್ಲಿ ಡಾ.ಧನಂಜಯ ಸರ್ಜಿ ಅನಿಸಿಕೆ

​ಪ್ರಜಾವಾಣಿ ವಾರ್ತೆ
Published 13 ಮೇ 2022, 2:19 IST
Last Updated 13 ಮೇ 2022, 2:19 IST
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಶುಶ್ರೂಷಕಿಯರ ಸಂಭ್ರಮ.
ಶಿವಮೊಗ್ಗದ ಸರ್ಜಿ ಆಸ್ಪತ್ರೆಯಲ್ಲಿ ನಡೆದ ವಿಶ್ವ ದಾದಿಯರ ದಿನಾಚರಣೆಯಲ್ಲಿ ಶುಶ್ರೂಷಕಿಯರ ಸಂಭ್ರಮ.   

ಶಿವಮೊಗ್ಗ: ಇಡೀ ಪ್ರಪಂಚವೇ ಸಂಕಷ್ಟದಲ್ಲಿರುವಾಗ ಧೈರ್ಯ ತುಂಬಿದವರು, ಬದುಕಿನ ಭರವಸೆ ಕಳೆದುಕೊಂಡು ಕೈಚೆಲ್ಲಿ ಕುಳಿತಾಗ ಆಸರೆಯಾದವರು, ಕಾಲಚಕ್ರದ ಜತೆಗೆ ಪೈಪೋಟಿಗಿಳಿದು ಜನರ ಆರೋಗ್ಯವನ್ನು ಕಾಪಾಡಿದವರು, ಕೊರೊನಾ ಎಂಬ ರೋಗ ಬಂದು ಸಂಬಂಧಗಳನ್ನೇ ಮರೆತಿರುವಾಗ ಬಂಧುವಂತೆ ಆರೈಕೆ ಮಾಡಿದ ಮಹಾತಾಯಿಯರು ಶುಶ್ರೂಷಕಿಯರು ಎಂದು ಸರ್ಜಿ ಆಸ್ಪತ್ರೆ ಮುಖ್ಯಸ್ಥ ಡಾ.ಧನಂಜಯ ಸರ್ಜಿ ಶ್ಲಾಘಿಸಿದರು.

ಸರ್ಜಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಜೆಸಿಐ ಸಂಸ್ಥೆ ಸಹಯೋಗದಲ್ಲಿ ಗುರುವಾರ ನಡೆದ ವಿಶ್ವ ದಾದಿಯರ ದಿನದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪ್ರತಿವರ್ಷ ಮೇ 12ರಂದು ಅಂತರರಾಷ್ಟ್ರೀಯ ದಾದಿಯರ ದಿನಾಚರಣೆ ಆಚರಿಸುತ್ತಾರೆ. ಫ್ಲಾರೆನ್ಸ್ ನೈಟಿಂಗೇಲ್ ಹುಟ್ಟಿದ ದಿನವಿದು. ಶುಶ್ರೂಷಕಿಯರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಗುರುತಿಸಲು ವಿಶ್ವದಾದ್ಯಂತ ಈ ದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಗುತ್ತದೆ ಎಂದು ವಿವರ ನೀಡಿದರು.

ADVERTISEMENT

ಕೊರೊನಾದಂತಹ ತುರ್ತು ಸಮಯದಲ್ಲಿ ಹಗಲು-ರಾತ್ರಿ ದುಡಿದಿದ್ದಾರೆ. ಮನೆ ಇದೆ, ಮಕ್ಕಳಿದ್ದಾರೆ, ಕುಟುಂಬವೂ ಇರುತ್ತೆ. ಆದರೆ, ಕೊರೊನಾ ಬಂದಮೇಲೆ ಇವೆಲ್ಲವೂ ಅವರಿಗೆ ಎರಡನೆಯ ಆದ್ಯತೆ ಆಗಿದೆ. ಅನಿವಾರ್ಯದ ಜತೆ ವೃತ್ತಿಧರ್ಮ ಅವರನ್ನು ಮನೆಯಲ್ಲಿರಲು ಬಿಡುತ್ತಿಲ್ಲ. ತಮ್ಮ ಕೆಲಸ ಕೊರೊನಾ ಕಾಲದಲ್ಲಿ ಎಷ್ಟು ಅಪಾಯಕಾರಿ ಎಂದು ತಿಳಿದರೂ ಕೆಲಸಕ್ಕೆ ಬರಲು ಹಿಂದೇಟು ಹಾಕಲಿಲ್ಲ. ಹಾಗೊಂದು ವೇಳೆ ಹಿಂಜರಿದಿದ್ದರೆ ವಿಶ್ವದ ಆರೋಗ್ಯ ವ್ಯವಸ್ಥೆ ಕಲ್ಪಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದರು.

ಜೆಸಿಐ ಸಂಸ್ಥೆ ಅಧ್ಯಕ್ಷ ಸತೀಶ್‌ಚಂದ್ರ ಮಾತನಾಡಿ, ‘ಸೇವೆಗೆ ಮತ್ತೊಂದು ಹೆಸರು ಶುಶ್ರೂಷಕಿಯರು. ಹಗಲಿರುಳೂ ಅಪರಿಚಿತರ ಆರೋಗ್ಯ ಸಂರಕ್ಷಣೆಗಾಗಿ ಬದುಕು ಸವೆಸುತ್ತಿರುವ ಅವರ ಕಾರ್ಯ ಶ್ಲಾಘನೀಯ. ನಿಸ್ವಾರ್ಥ ಸೇವೆ ಸಲ್ಲಿಸುವ ಅವರನ್ನು ವರ್ಷದ ಎಲ್ಲ ದಿನಗಳಲ್ಲೂ ಸ್ಮರಿಸಬೇಕಿದೆ’ ಎಂದು ಅಭಿಪ್ರಾಯಪಟ್ಟರು. ಆಸ್ಪತ್ರೆಯ ನಿರ್ದೇಶಕಿ ನಮಿತಾ ಸರ್ಜಿ, ವೈದ್ಯಕೀಯ ಅಧೀಕ್ಷಕ ಎಚ್‌.ಎಸ್‌.ಸತೀಶ್‌, ಪುರುಷೋತ್ತಮ್‌ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.