ಶಿವಮೊಗ್ಗ: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ‘ಆಪ್ತ ಸಹಾಯಕ’ ಎಂದು ಹೇಳಿಕೊಂಡು, ವರ್ಗಾವಣೆ ಮಾಡಿಸುವುದಾಗಿ ಮತ್ತು ಸರ್ಕಾರಿ ಕೆಲಸ ಕೊಡಿಸುವುದಾಗಿ ಹೇಳಿ ಅಧಿಕಾರಿಗಳು ಹಾಗೂ ಸಾರ್ವಜನಿಕರನ್ನು ವಂಚಿಸುತ್ತಿದ್ದ ವ್ಯಕ್ತಿಯನ್ನು ಇಲ್ಲಿನ ಜಯನಗರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
ಮೈಸೂರಿನ ರಾಮಕೃಷ್ಣನಗರ ನಿವಾಸಿ, ನಿವೃತ್ತ ತಹಶೀಲ್ದಾರ್ ಪುತ್ರ ಎಸ್.ವಿ.ಎನ್.ರಘುನಾಥ (36) ಬಂಧಿತ.
ಈಚೆಗೆ ವರ್ಗಾವಣೆಗೊಂಡು ಸ್ಥಳ ನಿಯುಕ್ತಿಗೆ ಕಾಯುತ್ತಿದ್ದ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿಯೊಬ್ಬರನ್ನು ಸಂಪರ್ಕಿಸಿದ್ದ ರಘುನಾಥ, ‘ತಾನು ಸಚಿವ ಮಧು ಬಂಗಾರಪ್ಪ ಅವರ ಸೊರಬದ ಗೃಹ ಕಚೇರಿಯಲ್ಲಿ ಆಪ್ತ ಸಹಾಯಕ’ ಎಂದು ಪರಿಚಯಿಸಿಕೊಂಡಿದ್ದ. ‘ನಿಮಗೆ ಸ್ಥಳ ನಿಯುಕ್ತಿ ಮಾಡಿಸಿಕೊಡುವೆ’ ಎಂದು ತಿಳಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದ. ಅನುಮಾನಗೊಂಡಿದ್ದ ಅಧಿಕಾರಿ ಮಧು ಬಂಗಾರಪ್ಪ ಅವರ ಕಚೇರಿಗೆ ಮಾಹಿತಿ ನೀಡಿದ್ದರು. ನಂತರ ಸಚಿವರ ಸೂಚನೆ ಮೇರೆಗೆ ಯುವ ಕಾಂಗ್ರೆಸ್ ಮುಖಂಡ ಗಿರೀಶ್ ಇಲ್ಲಿನ ಜಯನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
‘ಆರೋಪಿ ವಿರುದ್ಧ ಬೆಂಗಳೂರಿನ ವಿಧಾನಸೌಧ, ಹೈಗ್ರೌಂಡ್ಸ್ ಠಾಣೆ, ತುಮಕೂರು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸೇರಿ ವಿವಿಧೆಡೆ ವಂಚನೆ ಪ್ರಕರಣ ದಾಖಲಾಗಿವೆ. ಈತನ ಬಳಿ ನಾಲ್ಕೈದು ಸಚಿವರ ನಕಲಿ ಲೆಟರ್ ಹೆಡ್ಗಳು ದೊರೆತಿವೆ’ ಎಂದು ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.