ಶಿವಮೊಗ್ಗ: ಮಹಾನಗರ ಪಾಲಿಕೆ ವತಿಯಿಂದ ಜಿಲ್ಲಾ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ನಗರದ ಕುವೆಂಪು ರಂಗಮಂದಿರದಲ್ಲಿ ಕವಿಗೋಷ್ಠಿ ನಡೆಯಿತು. ಜಿಲ್ಲೆಯ ವಿವಿಧೆಡೆಯಿಂದ ಬಂದಿದ್ದ ತಮ್ಮ ಕವಿತೆಗಳನ್ನು ಪ್ರಸ್ತುತ ಪಡಿಸಿದರು.
ನವೀನ್ ಕುಮಾರ್– ಕುಕ್ಕರ್ಗಳು ಎಂಬ ಶಿರ್ಷಿಕೆಯಡಿ ಗೃಹಿಣಿಗೆ ಹೋಲಿಸಿ ಮಹಿಳೆಯರ ಭಾವನೆ ಮತ್ತು ಬದುಕಿನ ಏಳು–ಬೀಳುಗಳನ್ನು ಕುಕ್ಕರ್ಗಳಿಗೆ ಸಮೀಕರಿಸಿ ಕವನ ಪ್ರಸ್ತುತ ಪಡಿಸಿದರು. ಸಿದ್ದರಾಮ- ತಪ್ಪು, ದೊಡ್ಡವರು, ಕೂಡುವಿಕೆ, ಸಾವು, ಮದುವೆ, ಖರ್ಚು ಹಾಗೂ ಸಾಲದ ಕುರಿತಾಗಿ ಕವಿತೆ ಓದಿದರು. ಕವಿ ಮಂಜಪ್ಪ ಸಾವು ಮತ್ತು ಅಳು, ಡಿ.ಗಣೇಶ್– ಧ್ವನಿಯೇ ಇಲ್ಲದವರು ಎಂಬ ಕವನ ವಾಚಿಸಿದರು.
ಪೀಟರ್- ಮಳೆ ಮತ್ತು ಚಿಟ್ಟೆಯ ಶಿರ್ಷಿಕೆಯ ಕವಿತೆ ವಾಚಿಸಿದರು. ‘ಹಾರುವ ಚಿಟ್ಟೆ ನಿನಗೇಕೆ ಅಂಜಿಕೆ. ಅರಳುವ ಹೂಗಳೇ ನಿನಗೇಕೆ ನಾಚಿಕೆ.ಗೂಡಲ್ಲಿರುವ ಹಕ್ಕಿಯೇ ನಿನಗೇಕೆ ಬೆದರಿಕೆ. ನಾನೇ ನಿನ್ನ ಎದೆಯಲ್ಲಿರುವಾಗ ಭಯವೇಕೆ, ನಾನೇ ನಿನ್ನ ಎದುಲ್ಲಿರುವಾಗ ಚಿಂತೆ ಯಾಕೆ. ಪ್ರತಿ ಪಕ್ಷಿಗೂ ತನ್ನದೆ ಹಾದಿ ಇದೆ. ಪ್ರತಿ ಮನುಷ್ಯನಿಗೂ ತನ್ನದೇ ದಾರಿ ಇದೆ. ಹಾರುವಾಗ ಇಲ್ಲದ ಭಯ, ಹಾರಿದ ಮೇಲೆ ಏತಕೆ ಭಯ’ ಎಂದು ಕವಿತೆ ವಾಚಿಸಿದರು.
ರಾಧಾ ಕಂಕಾರಿ– ಬೇಲಿ ಮೇಲಿನ ಹೋವಿನ ವಿನಂತಿ, ಮುನೀರ್ ಅಹಮದ್ ಕುಂಸಿ– ಭುವನದಲ್ಲಿ ಭವ್ಯ ಸುಂದರ ಈ ಧರೆಯ ಅಂಗಳ ಬಲು ಸಂದರ ಎಂಬ ದೇಶ ಭಕ್ತಿ ಕವನ ಓದಿದರು. ಪುರುಷೋತ್ತಮ್ ಖರೀದಿಸುವ ಕನಸು, ನವೀನ್ ಮಂಡಗದ್ದೆ– ಕವಿತೆಯ ಬಜಾರ್, ಸೊಪ್ಪುಗುಡ್ಡೆ ಲೋಕಯ್ಯ– ಮಾರಾಟಕ್ಕಿದ್ದೆ ತಾಯಿ ಎದೆ ಹಾಲು, ಡಿ.ನಾಗೋಜಿರಾವ್– ಜೀವನ ಪಾಠ ಎಂಬ ಶಿರ್ಷಿಕೆಯ ಕವಿತೆಪ್ರಸ್ತುತ ಪಡಿಸಿದರು.
ಕವಿ ಶ್ರೀನಿವಾಸ್– ಗುರುತ್ತಿಲ್ಲದವರು, ಪಿ.ಕೆ.ಸತೀಶ್– ಸಂತನಾಗುವ ಸಮಯ, ಊರ್ಮಿಳಾ ರಾವ್– ನಕ್ಕನಾ ಕೃಷ್ಣ, ಶುಭ ಮರವಂತೆ– ಬಯಲು ದೇಹಿಯ ಸಂಗಾತಿ ಹಾಗೂ ಮಮತಾ ಹೆಗಡೆ ಅವರು ಪೂರ್ವ ಪಶ್ಚಿಮಗಳ ಸಂಗಮವಿದು ನಮ್ಮ ಈ ಭಾರತ ಎಂಬಶಿರ್ಷಿಕೆಯ ಕವಿತೆ ಓದಿದರು.
ಕವಿಗಳಿಗೆ ಪಾಲಿಕೆಯಿಂದ ಅಭಿನಂದನಾ ಪತ್ರ ವಿತರಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ.ಮಂಜುನಾಥ್ ಕವಿಗೋಷ್ಠಿ ಉದ್ಘಾಟಿಸಿದರು. ಪಾಲಿಕೆ ಆಡಳಿತ ಪಕ್ಷದ ನಾಯಕ ಚನ್ನಬಸಪ್ಪ, ಪಾಲಿಕೆ ಸದಸ್ಯರಾದನಾಗರಾಜ ಕಂಕಾರಿ, ಮಂಜುನಾಥ್, ಶಿವಕುಮಾರ್, ಯೋಗೀಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.