ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡರ ನಿರ್ದೇಶಕ ಸ್ಥಾನರದ್ದುಗೊಳಿಸಿ ಸಹಕಾರ ಇಲಾಖೆ ಜಂಟಿ ನಿಬಂಧಕರು ಆದೇಶ ಹೊರಡಿಸಿದ್ದಾರೆ.
2014ರಲ್ಲಿ ಡಿಸಿಸಿ ಬ್ಯಾಂಕ್ ಗಾಂಧಿಬಜಾರ್ ಶಾಖೆಯಲ್ಲಿ ನಡೆದ ₹ 62.77 ಕೋಟಿ ಮೊತ್ತದ ಚಿನ್ನ ಅಡಮಾನ ಸಾಲದ ಹಗರಣದ ಕಾರನ ನೀಡಿ ಇಲಾಖೆಯ ಜಂಟಿ ನಿಬಂಧಕರು ಎರಡು ತಿಂಗಳ ಹಿಂದಷ್ಟೆ ಅವರ ವಿರುದ್ಧ ಆದೇಶ ನೀಡಿದ್ದರು. ಆದೇಶದ ಬೆನ್ನಲ್ಲೇ ಉಪಾಧ್ಯಕ್ಷರಾಗಿದ್ದ ಬಿಜೆಪಿಯ ಎಂ.ಬಿ.ಚನ್ನವೀರಪ್ಪ ಪ್ರಭಾರ ವಹಿಸಿಕೊಂಡಿದ್ದರು. ಅಧ್ಯಕ್ಷರ ಆಯ್ಕೆಗೆ ಚುನಾಚಣೆಯೂ ನಿಗದಿಯಾಗಿತ್ತು.
ನಿರ್ದೇಶಕ ಸ್ಥಾನದಿಂದ ವಜಾಗೊಳಿಸಿದ ಆದೇಶ ಪ್ರಶ್ನಿಸಿ ಮಂಜುನಾಥಗೌಡ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿದ ಕೋರ್ಟ್ ಜಂಟಿ ನಿರ್ದೇಶಕರ ಆದೇಶ, ಅಧ್ಯಕ್ಷ ಸ್ಥಾನದ ಚುನಾವಣಾ ಪ್ರಕ್ರಿಯೆಗೂ ತಡೆ ನೀಡಿತ್ತು. ನಂತರ ಮಂಜುನಾಥಗೌಡ ಅವರು ಅಧ್ಯಕ್ಷರಾಗಿ ಮತ್ತೆ ಅಧಿಕಾರ ಸ್ವೀಕರಿಸಿದ್ದರು.
ಕೋರ್ಟ್ ತಡೆಯಾಜ್ಞೆ ಬಳಿಕ ಸರ್ಕಾರ ಜಂಟಿ ನಿಬಂಧಕರ ಆದೇಶ ರದ್ದು ಮಾಡಿ, ಪ್ರಕರಣದ ವಿಚಾರಣೆ ನಡೆಸಲು ಚಿತ್ರದುರ್ಗ ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕರನ್ನು ನೇಮಿಸಿತ್ತು. ತನಿಖೆಗೆ ನಿಯೋಜಿತರಾಗಿದ್ದ ಜಂಟಿ ನಿಬಂಧಕರು ಮಂಜುನಾಥ ಗೌಡರನಿರ್ದೇಶಕ ಸ್ಥಾನ ರದ್ದುಗೊಳಿಸಿ ಮತ್ತೆ ಆದೇಶ ಹೊರಡಿಸಿದ್ದಾರೆ. ಐದು ವರ್ಷ ಯಾವುದೇ ಸಹಕಾರ ಸಂಘದ ಸದಸ್ಯತ್ವ ಪಡೆಯದಂತೆ ಸೂಚಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.