ಶಿವಮೊಗ್ಗ: ಡಿಸಿಸಿ ಬ್ಯಾಂಕ್ ಗಾಂಧಿ ಬಜಾರ್ ಶಾಖೆಯಲ್ಲಿ ಆರು ವರ್ಷಗಳ ಹಿಂದೆ ನಡೆದಿದ್ದ ಬಂಗಾರ ಅಡಮಾನ ಸಾಲದ ಹಗರಣವನ್ನು ಸಿಬಿಐಗೆ ವಹಿಸುವ ಕುರಿತು ಶುಕ್ರವಾರ ಬ್ಯಾಂಕ್ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚೆ ನಡೆದಿದೆ.
2014ರಲ್ಲಿ ನಡೆದಿದ್ದ ₹ 62.77 ಕೋಟಿ ಮೌಲ್ಯದ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸುಬೇಕು ಎಂದು ಬಿಜೆಪಿ ಬೆಂಬಲಿತ ನಿರ್ದೇಶಕರು ಒತ್ತಾಯಿಸಿದ್ದಾರೆ. ಪ್ರಸ್ತಾವಕ್ಕೆ ಉಪಾಧ್ಯಕ್ಷ ಎಚ್.ಎಲ್. ಷಡಾಕ್ಷರಿ ಸೇರಿದಂತೆ ಮಂಜುನಾಥ ಗೌಡರ ಬೆಂಬಲಿಗ ನಿರ್ದೇಶಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಪ್ರಕರಣ ಕುರಿತು ಸ್ಥಳೀಯ ಪೊಲೀಸರು, ಸಹಕಾರ ಇಲಾಖೆ ಅಧಿಕಾರಿಗಳು, ಸಿಐಡಿ ತನಿಖೆ ನಡೆಸಿವೆ. ಅಲ್ಲದೇ, ಪ್ರಕರಣ ಹೈಕೋರ್ಟ್ನಲ್ಲೂ ಇದೆ. ಇಂತಹ ಸಮಯದಲ್ಲಿ ಮತ್ತೊಂದು ತನಿಖೆ ಅಗತ್ಯವಿಲ್ಲ ಎಂದು ವಾದಿಸಿದ್ದಾರೆ.ಸಿಬಿಐ ತನಿಖೆಯ ಒತ್ತಾಯದ ಪ್ರಸ್ತಾವಕ್ಕೆ ಬೆಂಬಲ ದೊರೆಯದ ಕಾರಣ ನಿರ್ಣಯ ಅಂಗೀಕರಿಸಲು ಸಾಧ್ಯವಾಗಿಲ್ಲ.
ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕು.ಹಗರಣದ ಮೌಲ್ಯವನ್ನು ವಸೂಲಿ ಮಾಡಬೇಕು. ಠೇವಣಿದಾರರು ಹಾಗೂ ಗ್ರಾಹಕರ ಹಿತ ಕಾಪಾಡಬೇಕು ಎಂದು ಹಲವು ನಿರ್ದೇಶಕರು ಆಗ್ರಹಿಸಿದ್ದಾರೆ.
ಹೊರ ಜಿಲ್ಲೆಗಳ ಸಕ್ಕರೆ ಕಾರ್ಖಾನೆಗಳಿಗೆ ನೀಡಿದ ₹ 85 ಕೋಟಿ ಸಾಲದ ವಿಷಯದಲ್ಲಿ ಹಿಂದಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕರ ನಡೆಯನ್ನೂಕೆಲವು ನಿರ್ದೇಶಕರು ಖಂಡಿಸಿದ್ದಾರೆ.
‘ಸಿಬಿಐಗೆ ವಹಿಸುವ ಕುರಿತು ನಿರ್ದೇಶಕರೊಬ್ಬರು ಪ್ರಸ್ತಾಪ ಮಾಡಿದರು. ಕೆಲವರು ವಿರೋಧ ವ್ಯಕ್ತಪಡಿಸಿದರು. ಆಡಳಿತ ಮಂಡಳಿ ಅಂತಹ ಯಾವುದೇ ನಿರ್ಣಯ ಅಂಗೀಕರಿಸಿಲ್ಲ’ ಎಂದು ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಪ್ರತಿಕ್ರಿಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.